ರಾಯಚೂರು.ಏ.16:- ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ ಜಿಲ್ಲೆಯಾದ್ಯಂತ ಸರಕಾರಿ ಹೋರ್ಡಿಂಗ್ಸ್, ಫಲಕಗಳ ಮೇಲೆ ಇರುವ ಮಾಹಿತಿಗಳನ್ನು, ಫೋಟೋಗಳನ್ನು ಮರೆಮಾಚಲು ಬಿಳಿ ಬಟ್ಟೆಗಳನ್ನು ಹಾಕಲಾಗಿದೆ. ಮಾಚ್೯ 29 ರಿಂದಲೇ ಇದನ್ನು ಅನುಷ್ಠಾನಗೊಳಿಸಲಾಗಿದೆ.
ದೇವದುರ್ಗ ಪುರಸಭೆ ಕಚೇರಿ ಸಮಿಪದ ಸರಕಾರಿ ಫಲಕದ
ಮೇಲೆ ಹಾಕಲಾಗಿದ್ದ ಬಿಳಿ ಬಟ್ಟೆಯನ್ನು ಕಿಡಿಗೇಡಿಗಳು ಕಿತ್ತುಹಾಕಿ, ಸರಕಾರಿ ಫಲಕಗಳ ಮಾಹಿತಿಗಳನ್ನು ಕಾಣುವಂತೆ ಮಾಡುತ್ತಿರುವ ಪ್ರಕರಣ ವರದಿಯಾಗಿದೆ. ಇದರಿಂದ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯ ದೂರುಗಳು ಬರುತ್ತಿವೆ.
ಈಗಾಗಲೇ ಜಿಲ್ಲೆಯಲ್ಲಿ ಸರಕಾರಿ ಫಲಕಗಳ ಮಾಹಿತಿಗಳನ್ನು ಬಿಳಿಬಟ್ಟೆಯಿಂದ ಮರೆಮಾಚಲಾಗಿದ್ದರೂ, ಉದ್ದೇಶಪೂರ್ವಕವಾಗಿ ಕಿತ್ತು ತೆಗೆದು, ಅನಗತ್ಯ ವಿವಾದಕ್ಕೆ ಕಾರಣವಾಗುತ್ತಿವೆ.
ಇನ್ನು ಮುಂದೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಯಾರಾದರೂ ಮಾಡುವುದು ಕಂಡುಬಂದರೆ, ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.