
ಭಾಲ್ಕಿ:ಆ.18:ತಾಲೂಕಿನ ಹುಣಜಿ(ಕೆ) ಗ್ರಾಮದ ನಾಲ್ಕೈದು ಕಡೆಗಳಲ್ಲಿ ಸರಕಾರಿ ಜಮೀನು ಲಭ್ಯವಿದ್ದು ಸೂಕ್ತ ಸ್ಥಳವಕಾಶ ಗುರುತಿಸಿ ರೈತ ಸಂಪರ್ಕ ಕೇಂದ್ರ ಭವನ ಕಟ್ಟಡ ನಿರ್ಮಿಸಬೇಕು ಎಂದು ಹುಣಜಿ(ಕೆ) ಗ್ರಾಮದ ಪ್ರಮುಖರು ಒತ್ತಾಯಿಸಿದ್ದಾರೆ.
ಈ ಕುರಿತು ಪಟ್ಟಣದ ತಹಸೀಲ್ ಕಚೇರಿಯಲ್ಲಿ ಪ್ರಮುಖರು ತಹಸೀಲ್ದಾರ ಮೂಲಕ ಡಿಸಿಗೆ ಮನವಿ ಸಲ್ಲಿಸಿದರು. ಗ್ರಾಮದ ಕೆರೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿದ್ದ ರೈತ ಭವನ ಕಟ್ಟಡ ತಡೆ ಹಿಡಿದಿರುವುದನ್ನು ಸ್ವಾಗತಿಸುತ್ತೇವೆ.
ಗ್ರಾಮದ ಸರಕಾರಿ ನೀರಾವರಿ ಇಲಾಖೆ, ಸರಕಾರಿ ಗೈರಾಣು, ಕಾರಂಜಾ ಜಲಾಶಯ ವಿಭಾಗ ಸೇರಿ ವಿವಿಧ 5-6 ಎಕರೆ ಸರಕಾರಿ ಜಮೀನು ಇದ್ದು ತಾವುಗಳು ಖುದ್ದಾಗಿ ಪರಿಶೀಲಿಸಿ ಸೂಕ್ತ ಸ್ಥಳವಕಾಶ ಗುರುತಿಸಿ ರೈತ ಭವನ ಕಟ್ಟಡ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಡಿಸಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಹುಲೇಪ್ಪ ಮಾನಕಾರ್, ಜಗನ್ನಾಥ ಸಿರಂಜೆ, ಮಾಣಿಕರಾವ ಪಾಟೀಲ್, ಗುರುನಾಥ ಗೌಡಪ್ಪನೋರ್, ಜಗನ್ನಾಥ ಬಗಚೇಡಿ ಸೇರಿದಂತೆ ಮುಂತಾದವರು ಇದ್ದರು.