
ಹೈದರಾಬಾದ್: ಸೆ.4:ಮಹಾ ಮಾನವತವಾದಿ ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲಾ ಜಾತಿಯವರನ್ನು ಒಂದಡೆ ಕೂಡಿಸಿ ಮಾನವ ಜಾತಿ ಒಂದೇ ಎಂದು ಸಾರಿದ ಮಹಾನ ವ್ಯಕ್ತಿ ವಿಶ್ವಗುರು ಬಸವಣ್ಣ ಹೀಗಾಗಿ ಇವರು ಸಮಾನತೆಯ ಹರಿಕಾರರಾಗಿದ್ದಾರೆ ಎಂದು ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು. ತೆಲಂಗಾಣದ ರಾಜಧಾನಿ
ಹೈದರಾಬಾದ್ ನ ಅತ್ತಾಪೂರ ರಾಮ ಮಂದಿರದಲ್ಲಿ ಶನಿವಾರ ನಡೆದ ಶ್ರಾವಣ ಮಾಸದ ಪ್ರಯುಕ್ತ ಬಸವ ಧರ್ಮ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದಲಾವಣೆ ಜಗದ ನಿಯಮವಾಗಿದೆ. ಯಾವುದೂ ಶಾಶ್ವತ ಅಲ್ಲ. ಹೀಗಾಗಿ ಸುಖ, ದುಃಖಗಳೆರಡರಲ್ಲೂ ಸಮಾಧಾನದಿಂದ ಮುನ್ನಡೆಯಬೇಕು ಎಂದು ತಿಳಿಸಿದರು.
ಒಳ್ಳೆಯ ನಡೆ, ನುಡಿಯ ಮೂಲಕ ಅದನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಯಕ- ದಾಸೋಹ ಮಾಡಬೇಕು. ತಂದೆ-ತಾಯಿ ಸೇವೆಗೈಯಬೇಕು. ಸತ್ಸಂಗದಲ್ಲಿ ಕಾಲ ಕಳೆಯಬೇಕು. ಗುರುವಿನ ಉಪದೇಶಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಸನ್ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರು ಕಾಯಕ ನಿಷ್ಠೆ ಹೊಂದಿರಬೇಕು, ಕೈಲಾದ ಷ್ಟು ಇನ್ನೊಬ್ಬರಿಗೆ ಸಹಾಯ ಮತ್ತು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಶ್ರಾವಣ ಮಾಸದಲ್ಲಿ ಇಂತಹ ಸತ್ಸಂಗ ಕಾರ್ಯಕ್ರಮ ಮಾಡುವುದರಿಂದ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ಪೂಜ್ಯ ಶ್ರೀ ವೀರಭದ್ರ ಸ್ವಾಮಿಜೀ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿದರು
ಶಾಸಕರಾದ ಟಿ.ಪ್ರಕಾಶ ಗೌಡ, ಪ್ರಮುಖರಾದ ಶಂಕರ ಪಾಟೀಲ್, ಅನಿಲ ಪಾಟೀಲ್, ಅವಿನಾಶ ಭೋಸಿಕರ, ವೀರಶೆಟ್ಟಿ ಕುಂಬಾರ, ಸಂಜಯ ಪಾಟೀಲ್, ಶಿವಲಿಂಗಯ್ಯ ಸ್ವಾಮಿ ನಿರ್ಣಾ, ವಿಜಯಕುಮಾರ್ ಮೊದಲಾದವರು ಇದ್ದರು.