ಕಲಬುರಗಿ:ಮಾ.30: ‘ಖಡ್ಗಕ್ಕಿಂತ ಲೇಖನಿ ಹರಿತ’ ಎಂಬ ಮಾತು ಬರವಣಿಗೆಯ ಮಹತ್ವವನ್ನು ಸಾರುತ್ತದೆ. ಕೇವಲ ಕಲ್ಪನೆ ಆಧಾರಿತ, ವಾಸ್ತವಿಕತೆಗೆ ದೂರವಿರುವ, ಪ್ರಸ್ತುತವೆನಿಸದ ಸಾಹಿತ್ಯದಿಂದ ಸಮಾಜಕ್ಕೆ ಪ್ರಯೋಜನೆಯಾಗಲಾರದು. ಬದಲಿಗೆ ಸಮಾಜದಲ್ಲಿ ಕಂಡುಬರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವುಗಳಿಗೆ ಪರಿಹಾರವನ್ನು ಸೂಚಿಸುವ, ಸಮಾಜವನ್ನು ತಿದ್ದಿ, ಸರಿದಾರಿಗೆ ತರುವ ಸಾಹಿತ್ಯ ರಚನೆಯಾದರೆ ಅದಕ್ಕೆ ಹೆಚ್ಚಿನ ಬೆಲೆ ಬರುತ್ತದೆ ಮತ್ತು ಅಂತಹ ಕಾವ್ಯ, ಸಾಹಿತ್ಯ ಸಾರ್ವಕಾಲಿಕವಾಗಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ದೇವಿ ನಗರದ ಬಿರಾದಾರ ಕಾಂಪೆಕ್ಸ್ನ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ವಿಶ್ವ ಕಾವ್ಯ ದಿನಾಚರಣೆ’ಯನ್ನು ಕವಿತೆಯನ್ನು ವಾಚಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕವಿಯಲ್ಲಿ ಅದ್ಭುತವಾದ ಸಮಾಜಮುಖಿ ಚಿಂತನಾ ಶಕ್ತಿಯಿರಬೇಕು. ಉತ್ತಮ ಕವಿತೆಗಳು ಸಮಾಜದ ಪ್ರತಿಬಿಂಬವಾಗಿವೆ. ಇವುಗಳು ವ್ಯಕ್ತಿಯಲ್ಲಿರುವ ಭಾವನೆ, ಸಾಹಿತ್ಯ, ರಸಸ್ವಾದ, ಕಲ್ಪನಾಶಕ್ತಿ, ಆಶಯಭಾವ, ಹಾಡುಗಾರಿಕೆ ಅಂತಹ ಗುಣಗಳನ್ನು ಹೊರಹೊಮ್ಮಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಕವಿತೆಗಳನ್ನು ರಚಿಸುವ ಬಗೆಯನ್ನು ಹೇಳಿಕೊಡಬೇಕು. ಶ್ರೇಷ್ಠ ಕವನಗಳು ವ್ಯಕ್ತಿಗೆ ಆನಂದ, ತೃಪ್ತಿ, ಸೃಜನಶೀಲತೆ, ಉತ್ತಮ ಗಾಯಕರನ್ನಾಗಿಸುತ್ತದೆ. ಆದ್ದರಿಂದ ಕವನಗಳ ರಚನೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸತೀಶ್ ಹತ್ತಿ, ನಾಗೇಶ ಕೊಡಲಹಂಗರಗಾ, ಎಸ್.ಎಸ್.ಪಾಟೀಲ ಸೇರಿದಂತೆ ಮತ್ತಿತರರಿದ್ದರು.