ಸಮಾಜದಲ್ಲಿ ಸಮಾನತೆ-ಸಹಬಾಳ್ವೆ-ಸಾಮರಸ್ಯ ಸಾರಿದ ಜಗದ್ಗುರುಗಳು

ವಿಜಯಪುರ, ಮಾ.06: ಸಾಮರಸ್ಯ,ಸಹಬಾಳ್ವೆ, ಸೌಹಾರ್ದತೆಯ ಉತ್ತಮ ಸಂದೇಶಗಳು ಹಾಗೂ ತತ್ವಾದರ್ಶಗಳ ಕುರಿತು ಶ್ರೀ ಜಗದ್ಗುರು ರೇಣುಕಾಚಾರ್ಯ ಅವರ ಬೋಧನೆಗಳು ಸಾಮಾಜಿಕ ಸುಧಾರಣೆಗೆ ಪ್ರೇರಣೆಯಾಗಿವೆ ಎಂದು ವಿಜಯಪುರ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಿಜಯಪುರ ಇವರ ಸಹಯೋಗದಲ್ಲಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ (ಮಾ.5)ರಂದು ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರು ಮಾತನಾಡಿದರು.
ಸರ್ವ ಶ್ರೇಷ್ಠ,ಮೌಲಿಕವಾದ ಸಿದ್ಧಾಂತ ಶಿಖಾಮಣಿಯ ತತ್ವ ಸಿದ್ದಾಂತದ ಬೋಧನೆ ಮಾನವಕುಲ ದೈವತ್ವದೆಡೆಗೆ ಸಾಗಲು ದಾರಿ ದೀಪ. ಸಮಾಜದಲ್ಲಿನ ಜಾತೀಯತೆ, ಮೂಢ ನಂಬಿಕೆಗಳನ್ನು ಹೋಗಲಾಡಿಸಿ, ಸಮಾನತೆಯನ್ನು ಎತ್ತಿಹಿಡಿದು, ಸಾಮಾಜಿಕ ಸುಧಾರಣೆಯ ಕ್ರಾಂತಿಗೆ ಪಾತ್ರರಾದವರು ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಐ.ಬಿ.ಹಿರೇಮಠ ಅವರು ಶ್ರೀ ಜಗದ್ಗುರು ರೇಣುಕಾಚಾರ್ಯರ ಅವರ ಕುರಿತು ಉಪನ್ಯಾಸ ನೀಡಿ,ಜಾತಿ, ಮತ, ಪಂಥಗಳನ್ನು ಹೋಗಲಾಡಿಸಿ, ಸಮಾಜದಲ್ಲಿ ಸಮಾನತೆ ತತ್ವ ಸಾರಿದರು.
ನಾಡಿನ ಸಂಸ್ಕೃತಿಯನ್ನು ಎಲ್ಲೆಡೆ ಭಿತ್ತರಿಸಿರುವುದು ಸಮಾಜಿಕ ಕ್ರಾಂತಿಯ ಮೊದಲ ಹೆಜ್ಜೆಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಅವರು ನೀಡಿದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಜಗತ್ತಿಗೆ ಸಾರುವ ಕಾರ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಷ.ಪ್ರ. ಚೆನ್ನಾಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನಾಗಠಾಣ, ಪರಮಪೂಜ್ಯ ಷ. ಪ್ರ. ಚಂದ್ರಶೇಖರ ಶಿವಾಚಾರ್ಯರು ಸ್ವಾಮೀಜಿಗಳು, ಆಲಮೇಲ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಅನುಸೂಯ ಚಲವಾದಿ, ಸಮಾಜದ ಸಂಜು ಹಿರೇಮಠ,
ವಿ. ಸಿ. ನಾಗಠಾಣ, ಎಸ್. ಕೆ. ಸಾವಳಗಿಮಠ, ಗುರು ಗಚ್ಚಿನಮಠ ಚಿದಾನಂದ ಹಿರೇಮಠ, ಸಿದ್ರಾಮೇಶ್ವರ ಹಿರೇಮಠ, ಜಗದೀಶ ಹಿರೇಮಠ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಸುಭಾಸಚಂದ್ರ ಕನ್ನೊಳ್ಳಿ ನಿರೂಪಿಸಿ,ವಂದಿಸಿದರು.
ಮೆರವಣಿಗೆಗೆ ಚಾಲನೆ : ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 9.30 ಗಂಟೆಗೆ ಆರಂಭವಾದ ಶ್ರೀ ಜಗದ್ಗುರು ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ವಿಜಯಪುರ ಉಪ ವಿಭಾಗಾಧಿಕಾರಿ ಮಹೇಶ್ ಮಾಲಗಿತ್ತಿ ಅವರು ಚಾಲನೆ ನೀಡಿದರು.
ಮೆರವಣಿಗೆಯು ಕಲಾ ತಂಡದೊಂದಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತ,ಅಂಬೇಡ್ಕರ್ ವೃತ್ತ ಹಾಗೂ ಕನಕದಾಸ ವೃತ್ತದಿಂದ ಆಗಮಿಸಿ, ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಸಮಾಪ್ತಿಗೊಂಡಿತು.