(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.28: ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ಯಿಂದ ಜಿಲ್ಕುಲೆಯ ರುಗೋಡು ಪಟ್ಟಣದಲ್ಲಿ ರೈತರ ಜಿಲ್ಲಾ ಮಟ್ಟದ ಶಿಬಿರವನ್ನು ಇಂದು ಸಂಘಟಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಎಸ್ ಯು ಸಿ ಐ ಕಮ್ಯುನಿಸ್ಟ್ ರಾಧಾಕೃಷ್ಣ ಉಪಾಧ್ಯ ಅವರು ಮಾತನಾಡುತ್ತಾ ಇಂದು ರೈತರಿಗೆ ಮಾರಕ ವಾಗುವಂತಹ ಹಲವಾರು ಕಾಯ್ದೆಗಳು ಜಾರಿಗೆ ಬರುತ್ತಿವೆ, ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚುತ್ತಿವೆ, ಅದರ ಜೊತೆಗೆ ಇಂದು ನಡೆಯುವ ಪ್ರತಿಯೊಂದು ಚಟುವಟಿಕೆಗಳ ಹಿಂದೆ ರಾಜಕೀಯ ಉದ್ದೇಶ ಇದೆ, ಆದರೆ ಅದು ದುಡಿಯುವ ಜನಗಳ ಪರವಾಗಿರುವ ಉದ್ದೇಶ ಅಲ್ಲ, ಹಾಗಾಗಿ ದುಡಿಯುವ ಜನರ ಪರವಾಗಿ ಮಾಡುವ ರಾಜಕೀಯದ ಅವಶ್ಯಕತೆ ಇದೆ ಇಂದು ಹೇಳಿದರು.
ರೈತರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಗ್ರಾಮೀಣ ಸಮಿತಿಯ ಕಾರ್ಯದರ್ಶಿಗಳು ರೈತರ ಹೋರಾಟಗಳು ಬೆಳೆದು ಬಂದದ್ದು ಹೇಗೆ ಎಂಬುದನ್ನು ವಿವರಿಸಿದರು.
ಮತ್ತೋರ್ವ ಭಾಷಣಕಾರರಾಗಿ ಆಗಮಿಸಿದ್ದ ಎ ಐ ಕೆ ಕೆ ಎಂ ಎಸ್ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ವಿ.ನಾಗಮ್ಮಾಳ್ ಅವರು ರೈತರ ಮುಂದಿರುವ ಜವಾಬ್ದಾರಿಗಳು ಎಂಬ ವಿಷಯ ಕುರಿತಂತೆ ಹೇಳುತ್ತಾ ಎಲ್ಲಾ ಹಳ್ಳಿಗಳಲ್ಲಿ ಬಲಿಷ್ಠ ರೈತರ ಹೋರಾಟ ಬೆಳೆಸಲು ಕರೆ ನೀಡಿದರು.
ಜಿಲ್ಲಾ ಅಧ್ಯಕ್ಷರಾದ ಗೋವಿಂದ್ ಈ ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದರು, ಜಿಲ್ಲಾ ಉಪಾಧ್ಯಕ್ಷ ಬಸಣ್ಣ, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ರೈತರಾದ ಪಂಪಾಪತಿ, ಬಸವರಾಜ್, ಅನಿಲ್ , ಮಣಿಕಂಠ, ಸಂಡೂರು ತಾಲೂಕಿನ ಶಿವರುದ್ರಪ್ಪ, ಹೊನ್ನೂರಪ್ಪ, ಶಿವಪ್ಪ, ಮಲ್ಲಪ್ಪ ಗಾದಿಲಿಂಗ ಸೇರಿದಂತೆ ಇತರರು ಇದ್ದರು