ಸಮಸ್ಯೆಗಳ ಆಗರವಾದ ತೆಕ್ಕಲಕೋಟೆಯ ಸರ್ಕಾರಿ ಆಸ್ಪತ್ರೆ : ಸಾರ್ವಜನಿಕರ ಪರದಾಟ


ಜಾಲಿಹಾಳ್ ರಾಜಾಸಾಬ್
ಸಿರುಗುಪ್ಪ:ಜು,17- ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ  ಸಮುದಾಯ ಆರೋಗ್ಯ ಕೇಂದ್ರವು ಖಾಯಂ ವೈದ್ಯ, ಔಷಧ ತಜ್ಞರ ಕೊರತೆ, ಆಯುಶ್ ವೈದ್ಯಾಧಿಕಾರಿ, ಅಸಮರ್ಪಕ ಆಂಬುಲೆನ್ಸ್ ಸೇವೆ, ಗಬ್ಬುನಾರುವ ಆಸ್ಪತ್ರೆಯ ಒಳಾಂಗಣ, ಶೌಚಾಲಯ ಹಾಗೂ ರೋಗಿಗಳಿಗೆ ಸಕಾಲಕ್ಕೆ ದೊರಕದ ಚಿಕಿತ್ಸೆ ಸೇರಿದಂತೆ ಇತರ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ.
ಪಟ್ಟಣವು 20 ವಾರ್ಡ್‍ ಗಳನ್ನು ಹೊಂದಿ 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಒಳಗೊಂಡ ದೊಡ್ಡ ಪಟ್ಟಣವಾಗಿದೆ. ಅಲ್ಲದೆ ಬಲಕುಂದಿ, ಉಪ್ಪರ ಹೋಸಳ್ಳಿ, ನಿಟ್ಟೂರು, ಉಡೇಗೋಳ, ಹಳೇಕೋಟೆ ಸೇರಿದಂತೆ ಹಲವು ಗ್ರಾಮಗಳಿಗೆ ಕೇಂದ್ರ ಸ್ಥಾನವೂ ಆಗಿದೆ.
ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಇಲಾಖೆಯು ಆಸ್ಪತ್ರೆಗೆ ಖಾಯಂ ವೈದ್ಯ, ಔಷಧಿ ತಜ್ಞ ಸೇರಿದಂತೆ ಇತರ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡದೇ ಕಾಲಹರಣ ಮಾಡಿ, ಬಡ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
23 ಖಾಯಂ ಸಿಬ್ಬಂದಿ ಇರಬೇಕಾದ ಆಸ್ಪತ್ರೆಯಲ್ಲಿ ಪ್ರಸ್ತುತ ಅರವಳಿಕೆ ತಜ್ಞ, ಒಬ್ಬ ಮಕ್ಕಳ ತಜ್ಞರು, ಒಬ್ಬ ದಂತ ವೈದ್ಯಾಧಿಕಾರಿ ಸೇರಿದಂತೆ ಹತ್ತು ಜನ ಮಾತ್ರ ಬೆಳಿಗ್ಗೆಯಿಂದ ಸಂಜೆಯವರೆಗೂ ಸೇವೆ ಸಲ್ಲಿಸುತ್ತಾರೆ. ರಾತ್ರಿ ಸಮಯದಲ್ಲಿ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿಗಳ ಕೊರತೆಯಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಇತರ ಬಡ ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ಪರದಾಡುವುದು ಸಾಮಾನ್ಯವಾಗಿದೆ.
ಕೇಂದ್ರದಲ್ಲಿ ಸಿಬ್ಬಂದಿಗಳು ಸಣ್ಣ ಪುಟ್ಟ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡದೇ ನೇರವಾಗಿ ಸಿರುಗುಪ್ಪ ತಾಲ್ಲೂಕು ಆಸ್ಪತ್ರೆಗೆ ತೆರಳುವಂತೆ ಸೂಚಿಸುವುದು, ಎಲ್ಲ ಕಾಯಿಲೆಗಳಿಗೂ ಒಂದೇ ತರಹದ ಔಷಧ ನೀಡುವುದು ಹಾಗೂ ಗಾಯ, ಜ್ವರ ಹಾಗೂ ರಕ್ತ ವೃದ್ಧಿಯ ಮಾತ್ರೆ ಸೇರಿದಂತೆ ಇತರೆ ಅವಶ್ಯಕ ಮಾತ್ರೆಗಳನ್ನು ಹೊರ ತರುವಂತೆ ಚೀಟಿ ಬರೆಯುವುದು ಸಾಮಾನ್ಯವಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.
ಇತ್ತೀಚೆಗೆ ತಾಲ್ಲೂಕು ವೈದ್ಯಾಧಿಕಾರಿ ಈರಣ್ಣ ಆಸ್ಪತ್ರೆಗೆ ಭೇಟಿ ನೀಡಿ  ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು  ಅಲ್ಲಿನ ಅವ್ಯವಸ್ಥೆ ಕಂಡು ತರಾಟೆಗೆ ತೆಗೆದುಕೊಂಡಿದ್ದರು.
‘ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯ, ಔಷಧ ತಜ್ಞರನ್ನು ಶೀಘ್ರವಾಗಿ ನೇಮಿಸಬೇಕು. ಆಂಬುಲೆನ್ಸ್ ಸೇವೆ, ಔಷಧಗಳನ್ನು ಕೊರತೆಯಾಗದಂತೆ ಸರ್ಕಾರವು ಸೂಕ್ತ ವಹಿಸಬೇಕು. ಗಬ್ಬುನಾರುವ ಆಸ್ಪತ್ರೆಯ ಒಳಾಂಗಣ, ಶೌಚಾಲಯವನ್ನು ಸ್ವಚ್ಚಗೊಳಿಸಬೇಕು’ ಪೊಸ್ಟಮ್ಟಾಂ ಕೂಠಡಿ ಇಲ್ಲಾದೆ ಜನರು ಪರದಾಡುವಂತಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದವೇಂದ್ರ ಬಾಲಪ್ಪ ಒತ್ತಾಯಿಸಿದರು.
ವಿದ್ಯುತ್ ಸಮಸ್ಯೆ ಕಾರ್ಯಾಚರಿಸದ ಜನರೇಟರ್ :
ಆರೋಗ್ಯ ಕೇಂದ್ರದಲ್ಲಿ 40ಕ್ಕೂ ಹೆಚ್ಚು ಕೊಠಡಿಗಳಿದ್ದು 25 ಕೆವಿ ಜನರೇಟರ್ ಹಾಕಿದ್ದಾರೆ, ಇಲ್ಲಿ ಶಸ್ತ್ರಚಿಕಿತ್ಸಾ ವಿಭಾಗವೂ ಇರುವುದರಿಂದ 100 ಕೆವಿ ಜನರೇಟರ್ ಅಗತ್ಯಇದೆ, ಕೇವಲ 25 ಕೆವಿ ಜನರೇಟರ್ ಇರುವುದರಿಂದ ಸದಾ ವಿದ್ಯುತ್ ಸಮಸ್ಯೆ ಸಾಮಾನ್ಯವಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ವೈದಾಧಿಕಾರಿ ಡಾII ದಿನೇಶ್.
ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗೆ ವಸತಿ ಗೃಹಗಳು ಇಲ್ಲ ಹಾಗೂ ರಾತ್ರಿ ಪಾಳಿಯ ನಂತರ ಹಗಲಿನಲ್ಲಿ ಕಾರ್ಯನಿರ್ವಹಿಸಲು ಸಾಮಾನ್ಯ ವೈದ್ಯಾಧಿಕಾರಿಗಳು (ಪಿಡಿಎಂಒ) ಇರುವುದಿಲ್ಲ ಹೀಗಿರುವಾಗ ರಾತ್ರಿ ವೈದ್ಯರು ಇರುವುದು ಸಮಸ್ಯೆಯಾಗಿದೆ ಎಂದು ಸಿಬ್ಬಂದಿಗಳು ತಮ್ಮ ಅಳಲು ತೋಡಿಕೊಂಡರು.
-ಕೇಂದ್ರದಲ್ಲಿನ ಖಾಲಿ ಹುದ್ದೆಗಳ ಕುರಿತಂತೆ ಕೆಡಿಪಿ ಸಭೆಯಲ್ಲಿ ಶಾಸಕರ ಗಮನಕ್ಕೆ ತರಲಾಗಿದೆ ಹಾಗೂ ಈ ಕುರಿತಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶುಚಿತ್ವ ಹಾಗು ಜನರೇಟರ್ ಸಮಸ್ಯೆಗೆ ಸಂಬಂಧಿಸಿದಂತೆ ಶೀಘ್ರವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು’
– ಡಾ|| ಡಿ ಈರಣ್ಣ
 ಸಿರುಗುಪ್ಪ ತಾಲ್ಲೂಕು ವೈದ್ಯಾಧಿಕಾರಿ