
ಗೌರಿಬಿದನೂರು.ಆ೧೮:ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಗೌತಮಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ’ತಳ ಸಮುದಾಯಗಳ ಸಂಸ್ಕೃತಿ ಹಾಗೂ ಸಾಹಿತ್ಯದ ಒಂದು ನೋಟ’ ಎಂಬ ಕಾರ್ಯಕ್ರಮವನ್ನು ಚರ್ಮದ ವಾದ್ಯಗಳನ್ನು ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕವಿ, ಸಾಹಿತಿ, ಚಿಂತಕರಾದ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ’ಸಂಸ್ಕೃತಿ’ ಎಂಬ ಪರಿಕಲ್ಪನೆ ಮುನ್ನೆಲೆಗೆ ಬಂದು ಸುಮಾರು ಒಂದು ಶತಮಾನ ಪೂರೈಸಿದೆ ಸಮಾಜದಲ್ಲಿ ಕಳೆದ ಎರಡೂವರೆ ದಶಕಗಳಿಂದಲೂ ಸಂಸ್ಕೃತಿ ಮತ್ತು ನಾಗರೀಕತೆಯ ಹೆಸರಿನಲ್ಲಿ ರಾಜಕಾರಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಳ ಸಮುದಾಯಗಳು ಇಂದಿಗೂ ತಮ್ಮ ಮೂಲ ಕಸುಬು ಮತ್ತು ಕಲೆಯನ್ನೆ ನಂಭಿ ಬದುಕುವ ಪರಿಸ್ಥಿತಿ ಎದುರಾಗಿದೆ. ಸಮಾಜದ ಮುಖ್ಯ ವಾಹಿನಿಗೆ ಬಂದು ಎಲ್ಲರೊಂದಿಗೆ ಬೆರೆತು ಬಾಳುವ ಅವಕಾಶಗಳು ವಿರಳವಾಗಿವೆ. ಶಿಕ್ಷಣದ ಜತೆಗೆ ಸಂಸ್ಕೃತಿ ಮತ್ತು ನಾಗರೀಕತೆಯ ನೆಲೆಗಟ್ಟನ್ನು ಅರಿಯುವುದು ಅನಿವಾರ್ಯವಾಗಿದೆ. ಸಂಸ್ಕೃತಿ ಮತ್ತು ಪ್ರಕೃತಿ ಎರಡೂ ಕೂಡ ಮನುಕುಲದ ಉಳಿವಿಗೆ ಅಗತ್ಯವಾಗಿದ್ದು ಅವುಗಳನ್ನು ಸಂರಕ್ಷಣೆಗೆ ಮಾಡಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಂ.ಶಿವಣ್ಣ,ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ವೈ.ಟಿ.ಪ್ರಸನ್ನಕುಮಾರ್, ಚಿಂತಕರಾದ ಗಂಗಾಧರ್, ಲಿಂಗಣ್ಣ ಜಂಗಮರೆಡ್ಡಿ, ಆನೂಡಿ ನಾಗರಾಜ್, ಓಬಳೇಶ್, ಸೋರಪಲ್ಲಿ ಚಂದ್ರಶೇಖರ್, ಮಾರಪ್ಪ, ಮಂಜುನಾಥ್, ಅಶ್ವತ್ಥನಾರಾಯಣ, ಸಿ.ಜಿ.ಗಂಗಪ್ಪ, ಇಡಗೂರು ಸೋಮಯ್ಯ, ಗಿರೀಶ್, ಕಲಾವಿದರಾದ ದೇವರಮರಳೂರು ಮಹೇಶ್, ತಿಮ್ಮರಾಜು, ಕಿರಣ್, ನರಸಿಂಹಮೂರ್ತಿ, ಅನಿಲ್, ವಿ.ಎಂ.ಶ್ರೀಕಾಂತ್ ಸೇರಿದಂತೆ ಇತರರು ಭಾಗವಹಿಸಿದ್ದರು.