
ಬಳ್ಳಾರಿ,ಏ.15: ಚುನಾವಣೆಗಳು ಪ್ರಜಾತಂತ್ರದ ಉತ್ಸವಗಳು. ದೇಶದ ಪ್ರಗತಿಯ ದಿಕ್ಕನ್ನು ಬದಲಾಯಿಸುವ ಶಕ್ತಿ ನಮ್ಮ ಮತದಾನಕ್ಕಿದೆ. ತಾಲೂಕಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತವನ್ನು ಚಲಾಯಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಹೇಳಿದರು.
ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ, ಎನ್ಎಂಡಿಸಿ ದೋಣಿಮಲೈ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ತಾಲೂಕಿನ ದೋಣಿಮಲೈನಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಸಿಬ್ಬಂದಿಗಳು ಹಾಗೂ ಪ್ರಜ್ಞಾವಂತ ನಾಗರೀಕರು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಹೇಳಿದರು. ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾ.ಪಂ.ಇಒ ಎಚ್.ಷಡಾಕ್ಷರಯ್ಯ ಅವರು ಮಾತನಾಡಿ, ತಾಲೂಕಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುತ್ತಿದೆ. ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗುವಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶ್ರಮಿಸಲಾಗುತ್ತಿದ್ದು, ದೋಣಿಮಲೈನಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗುವಲ್ಲಿ ಎನ್ಎಂಡಿಸಿ ಸಿಬ್ಬಂದಿಯವರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಹಕರಿಸಬೇಕು ಎಂದರು.
ತಾಲೂಕು ದಂಡಾಧಿಕಾರಿ ಹಾಗೂ ಉಪಚುನಾವಣಾಧಿಕಾರಿ ಕೆ.ಎಂ ಗುರುಬಸವರಾಜ ಅವರು ಮಾತನಾಡಿ, ನಮ್ಮ ಮತ ನಮ್ಮ ಹಕ್ಕು ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಎಂ.ಡಿ.ಸಿ ದೋಣಿಮಲೈನ ಸಿಜಿಎಂ ಸಂಜೀವ್ ಸಾಹಿ ಅವರು ವಹಿಸಿದ್ದರು.
ಚುನಾವಣಾ ಅಧಿಕಾರಿ ಶರಣಬಸವರಾಜ, ಜಿ.ಪಂ ಪ್ರಭಾರ ಯೋಜನಾ ನಿರ್ದೇಶಕ ಪ್ರಮೋದ್, ಬಿಇಒ ಮೈಲೇಶ್ ಬೇವೂರ್, ಎನ್ಎಂಡಿಸಿ ಜನರಲ್ ಮ್ಯಾನೇಜರ್ ರಾಮಯ್ಯ, ನರಸಿಂಗಾಪುರ ಗ್ರಾ.ಪಂ. ಪಿಡಿಒ ಕರಿಯಪ್ಪ, ಗಣೇಶ್, ತಾ.ಪಂ. ಸಿಬ್ಬಂದಿ ಜಡಿಯಪ್ಪ, ಯಂಕಪ್ಪ, ಬನ್ನಿಹಟ್ಟಿ ಪ್ರೌಢಶಾಲೆ ಮುಖ್ಯಗುರು ವಾಣಿ, ದೋಣಿಮಲೈ ಸರಕಾರಿ ಪ್ರೌಢಶಾಲೆ ಮುಖ್ಯಗುರು ವೀರೇಶ್ ಹಾಗೂ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಮತದಾರ ಸಾಕ್ಷರತಾ ಕೇಂದ್ರದ ತಾಲೂಕು ನೋಡಲ್ ಅಧಿಕಾರಿ ಜಿ.ಎಂ.ಪ್ರದೀಪ್ಕುಮಾರ್ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು.
ನಂತರ ಮತದಾನ ಜಾಗೃತಿ ಬೈಕ್ ಜಾಥಾಕ್ಕೆ ಜಿ.ಪಂ. ಸಿಇಒ ರಾಹುಲ್ ಶರಣಪ್ಪ ಸಂಕನೂರ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಟ್ಟೂರಿನ ಹಸಿರು ಹೊನಲು ತಂಡದವರು, ಬಳ್ಳಾರಿಯ ಚಿಗುರು ತಂಡದವರು, ಕಲಾವಿದರಾದ ಯರಿಸ್ವಾಮಿ ಹಾಗೂ ಜಡೇಶ್ ಎಮ್ಮಿಗನೂರು ಜಾಗೃತಿ ನಾಟಕ ಹಾಗೂ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು.