
ಬೆಂಗಳೂರು,ಆ.೨೫-ನಗರದಲ್ಲಿ ಬಂಧಿತರಾದ ಶ್ರೀಲಂಕಾ ಮೂಲದ ಮೂವರು ಕಿಲ್ಲರ್ಗಳಿಗೆ ಹಣದ ನೆರವು ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಚೆನ್ನೈ ಮೂಲದ ಮನ್ಸೂರ್ ಹಾಗೂ ವಿವೇಕ ನಗರದ ಅನ್ಬಳಗನ್ ಬಂಧಿತ ಆರೋಪಿಗಳಾಗಿದ್ದು,ಬಂಧಿತ ಮನ್ಸೂರ್ ನಿಂದ ೫೭ ಲಕ್ಷ ರೂ. ನಗದು ಹಣ, ೧.೫ ಕೋಟಿ ರೂ ಮೌಲ್ಯದ ಡಿ.ಡಿ ವಶಕ್ಕೆ ಪಡೆಯಲಾಗಿದೆ.ಬಂಧಿತ ಆರೋಪಿಗಳಿಗೆ ನಗರದಲ್ಲಿ ನೆಲೆಸಲು ಅಗತ್ಯ ಖರ್ಚು ವೆಚ್ಚ ಎಂದು ಸುಮಾರು ೫೭ ಲಕ್ಷ ರೂ. ಹೊಂದಿಸಿದ್ದ ಮನ್ಸೂರ್, ಕೆಲವೇ ದಿನಗಳಲ್ಲಿ ಆ ಹಣವನ್ನು ಆರೋಪಿಗಳಿಗೆ ತಲುಪಿಸಲು ಸಿದ್ಧತೆ ನಡೆಸಿದ್ದ.ಹಣ ತಮ್ಮ ಕೈ ಸೇರಿದ ಬಳಿಕ ಆರೋಪಿಗಳು ಬೆಂಗಳೂರಿನಿಂದ ಇತರೆಡೆಗೆ ತೆರಳಲು ಸಜ್ಜಾಗಿದ್ದು,ಹೆಚ್ಚಿನ ತನಿಖೆಯನ್ನು ನಡೆಸಲಾಗಿದೆ ಎಂದು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಅವರು ತಿಳಿಸಿದ್ದಾರೆ.
ವಿದೇಶಕ್ಕೆ ತೆರಳಲು ಸಿದ್ಧತೆ:
ಆರೋಪಿಗಳು ಸಮುದ್ರ ಮಾರ್ಗದ ಮೂಲಕ ತಮಿಳುನಾಡಿನ ಸೇಲಂನಿಂದ ಬೆಂಗಳೂರಿಗೆ ಬರಲು ನೆರವಾಗಿದ್ದ ಜಲಾಲ್ ಎಂಬಾತನ ಮಾರ್ಗದರ್ಶನದಂತೆ ಮನ್ಸೂರ್ ಕೆಲಸ ನಿರ್ವಹಿಸುತ್ತಿದ್ದ. ಒಮಾನ್ನಲ್ಲಿರುವ ಜಲಾಲ್, ಬೆಂಗಳೂರಿನಲ್ಲಿರುವ ಆರೋಪಿಗಳಿಗೆ ೫೦ ಲಕ್ಷ ರೂ. ನೀಡುವಂತೆ ಮನ್ಸೂರ್ಗೆ ಸೂಚಿಸಿದ್ದ. ಅದರಂತೆ ಬೆಂಗಳೂರಿಗೆ ಬಂದ ಶ್ರೀಲಂಕಾ ಮೂಲದ ಆರೋಪಿಗಳಿಗೆ ಹಣ ನೀಡಲು ಮನ್ಸೂರ್ ಸಿದ್ಧವಾಗಿದ್ದ.
ಇತ್ತ ಅನ್ಬಳಗನ್ ಬೆಂಗಳೂರಿನಲ್ಲಿ ಪಾಸ್ಪೋರ್ಟ್ ಸಿದ್ಧಪಡಿಸಿ ಕೊಡುವ ಕೆಲಸಕ್ಕೆ ನಿಯೋಜನೆಯಾಗಿದ್ದ. ಅದಕ್ಕೆ ಬೇಕಾದ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ ಆತನನ್ನ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೊಬೈಲ್ ಸಂಭಾಷಣೆ:
ಹಣ ಪಡೆದು ನೇಪಾಳದಲ್ಲಿರುವ ಸಂಜೀವ್ ಎಂಬಾತನ ಜೊತೆ ಸೇರಿಕೊಳ್ಳಲು ಆರೋಪಿಗಳು ಸಿದ್ಧವಾಗಿದ್ದರು. ಸಂಜೀವ್ ಜೊತೆ ಆರೋಪಿಗಳು ಸಿಂಹಳೀಯ ಭಾಷೆಯಲ್ಲಿ ನಡೆಸಿರುವ ಮೊಬೈಲ್ ಸಂಭಾಷಣೆ ಸಹ ಲಭಿಸಿದೆ. ಬಂಧಿತ ಆರೋಪಿಗಳಿಗೆ ಸಿಂಹಳೀಯ ಭಾಷೆ ಮಾತ್ರ ತಿಳಿದಿದ್ದು ಭಾಷಾಂತರ ಮಾಡುವವರ ನೆರವು ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದರು.ಜಲಾಲ್ನ ನಿರ್ದೇಶನದಂತೆ ಜೈ ಪರಮೇಶ್, ಶ್ರೀಲಂಕಾದಿಂದ ಬಂದ ಆರೋಪಿಗಳಿಗೆ ಆಶ್ರಯ ನೀಡಿದ್ದ. ಇದಲ್ಲದೇ ಆರೋಪಿಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದ ಚೆನ್ನೈ ಮೂಲದ ಮನ್ಸೂರ್ ಎಂಬಾತನನ್ನೂ ಬಂಧಿಸಿ ೫೭ ಲಕ್ಷ ಜಪ್ತಿ ಮಾಡಲಾಗಿದ್ದು, ಸೆಪ್ಟೆಂಬರ್ ೧ರವರೆಗೂ ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ ಎಂದರು.
ಡ್ರಗ್ಸ್ ದಂಧೆಕೋರ:
ಜಲಾಲ್ ಶ್ರೀಲಂಕಾದ ಮೋಸ್ಟ್ ವಾಂಟೆಡ್ ಮಾದಕ ದಂಧೆಕೋರನಾಗಿದ್ದು, ಭಾರತದಲ್ಲಿ ಸಹ ಆತನಿಗೆ ಒಂದು ಪ್ರಕರಣದಲ್ಲಿ ೧೦ ವರ್ಷಗಳ ಸಜೆಯಾಗಿದೆ. ಭಾರತದಲ್ಲಿಯೂ ಆತ ವಾಂಟೆಡ್ ಲಿಸ್ಟ್ನಲ್ಲಿದ್ದಾನೆ. ಜಲಾಲ್ಗೆ ಪಾಸ್ಪೋರ್ಟ್ ವ್ಯವಸ್ಥೆ ಮಾಡಿಕೊಟ್ಟಿದ್ದ ಆರೋಪದಡಿ ಬೆಂಗಳೂರಿನ ಹಾರಿಜಾನ್ ಎಂಟರ್ಪ್ರೈಸಸ್ ಮಾಲೀಕ ಅನ್ಬಳಗನ್ ಬಂಧನವಾಗಿದೆ.
ಶ್ರೀಲಂಕಾದಲ್ಲಿ ಕೊಲೆ, ಗ್ಯಾಂಗ್ ವಾರ್ನಂತಹ ಕೃತ್ಯಗಳಲ್ಲಿ ಭಾಗಿಯಾಗಿ, ಬೆಂಗಳೂರಿಗೆ ಬಂದು ಅಕ್ರಮವಾಗಿ ನೆಲೆಸಿದ್ದ ಕಸನ್ ಕುಮಾರ್ ಸಂಕ (೩೬), ಅಮಿಲಾ ನುವಾನ್ ಅಲಿಯಾಸ್ ಗೋತಾ ಸಿಲ್ವಾ (೩೬) ರಂಗಪ್ರಸಾದ್ ಅಲಿಯಾಸ್ ಚುಟ್ಟಾ (೩೬) ಹಾಗೂ ಆರೋಪಿಗಳಿಗೆ ನಗರದಲ್ಲಿ ನೆಲೆಸಲು ಆಶ್ರಯ ನೀಡಿದ್ದ ಜೈ ಪರಮೇಶ್ (೪೨)ನನ್ನು ನಿನ್ನೆ ಸಿಸಿಬಿ ಪೊಲೀಸರು ಬಂಧಿಸಿದ್ದರು.