ಶೌರ್ಯ, ಸಾಹಸದ ವೀರ ಮಹಿಳೆ ಒನಕೆ ಓಬವ್ವ

ಕಲಬುರಗಿ,ನ.11: ಹೈದರಲಿಯ ಸೈನ್ಯದ ವಿರುದ್ದ ಹೋರಾಡಿ ಚಿತ್ರದುರ್ಗ ಮದಕರಿ ಸಾಮ್ರಾಜ್ಯವನ್ನು ರಕ್ಷಿಸಿದ ಒನಕೆ ಓಬವ್ವ ಶೌರ್ಯ, ಸಾಹಸದ ವೀರ ಮಹಿಳೆಯಾಗಿ ಇಡೀ ಸಮಸ್ಥ ಮಹಿಳಾ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ತನ್ನ ಯಜಮಾನಿಕೆಯ ಅಸ್ತತ್ವವನ್ನು ಉಳಿಸುವುದಕ್ಕಾಗಿ ಉಪ್ಪು ತಿಂದ ಮನೆಗೆ ದ್ರೋಹ ಬಗೆಯದೆ ಸ್ವಾಮಿನಿಷ್ಠೆಯನ್ನು ಮೆರೆಯುವ ಮೂಲಕ ದೇಶಕ್ಕೆ ನಾಡಿನ ಕೀರ್ತಿಯನ್ನು ಹೆಚ್ಚಿಸಿದ ಒಬವ್ವ ಮಾದರಿಯಾಗಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ಜೇವರ್ಗಿ ಪಟ್ಟಣದ ಬಸ್ ಸ್ಟಾಂಡ್ ಸಮೀಪವಿರುವ ‘ನರೇಂದ್ರ ಪಿಯು ಕಾಲೇಜ್’ನಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ಒನಕೆ ಓಬವ್ವ ಮತ್ತು ಡಾ.ಮೌಲಾನಾ ಅಬುಲ್ ಕಲಾಂ ಆಜಾದ ಅವರ ಜನ್ಮದಿನಾಚರಣೆ’ಯಲ್ಲಿ ಉಭಯ ಮಹನೀಯರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಚಾರ್ಯ ದೇವೇಂದ್ರ ಬಿ.ಗುಡೂರ್ ಮಾತನಾಡಿ, ಡಾ.ಆಜಾದ್‍ರು ಸ್ವಾತಂತ್ರ್ಯ ಹೋರಾಟಗಾರರಾಗಿ, ದೇಶದ ಪ್ರಥಮ ಶಿಕ್ಷಣ ಸಚಿವರಾಗಿ, ಶಿಕ್ಷಣ ತಜ್ಞರಾಗಿ ನಮ್ಮ ದೇಶಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಜನ್ಮದಿನವನ್ನು ‘ರಾಷ್ಟ್ರೀಯ ಶಿಕ್ಷಣ ದಿನ’ವನ್ನಾಗಿ ಆಚರಿಸುವ ಮೂಲಕ ಅವರಿಗೆ ಗೌರವ ನಿಡಲಾಗುತ್ತದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಲ್ಲಿಕಾರ್ಜುನ ಭಾಸಗಿ, ರಾಯಣ್ಣ ಕಟ್ಟಿಮನಿ, ನಬಿ ಪಟೇಲ್ ಈಜೇರಿ, ಶಿವಾನಂದ ಶಿಂಪಿ, ಕಲ್ಪನಾ ಎಸ್. ರೆಡ್ಡಿ, ಶಾಂತಕುಮಾರ ಯಲಗೂಡ, ದ್ಯಾವಣ್ಣ ಹಳ್ಳಿ, ಶಿವಾನಂದ ಬಡಿಗೇರ, ವೀರೇಶ ಗೋಗಿ, ಬಸವರಾಜ ಆಂದೋಲಾ ಸೊನ್ನ್, ಸೇವಕಿ ಸರಸ್ವತಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.