
ಬೆಂಗಳೂರು,ಮೇ೨೦:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು, ಬಿಬಿಎಂಪಿ ಚುನಾವಣೆಗಳನ್ನು ಇನ್ನು ೨-೩ ತಿಂಗಳಲ್ಲಿ ಮಾಡುತ್ತೇವೆ ಎಂದು ನೂತನ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ. ಇನ್ನೂ ಖಾತೆಗೆ ಲಾಬಿ ಮಾಡುವ ಪ್ರಶ್ನೆ ಇಲ್ಲ, ಯಾವ ಖಾತೆ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ ಎಂದರು.
ಪಕ್ಷದಲ್ಲಿ ನಾನು ಹಿರಿಯ ಶಾಸಕ ಹಾಗೂ ಹಿಂದೆ ಸಚಿವನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ಈ ಕಾರಣಕ್ಕೆ ಸಚಿವ ಸ್ಥಾನ ನಾಯಕರು ನೀಡಿದ್ದಾರೆ. ಅವರಿಗೆ ಧನ್ಯವಾದ ಎಂದರು.ಬಿಜೆಪಿ ಅವಧಿಯಲ್ಲಿ ಬಡವರಿಗೆ ಮತ್ತು ಮಧ್ಯವ ವರ್ಗದವರಿಗೆ ಸಾಕಷ್ಟು ತೊಂದರೆಗಳಾಗಿವೆ. ನಮ್ಮ ಸರ್ಕಾರ ಈ ವರ್ಗದವರಿಗೆ ನೆರವು ನೀಡುವ ಕೆಲಸ ಮಾಡುತ್ತದೆ. ಹಾಗೆಯೇ ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸುತ್ತೇವೆ ಎಂದರು.
ಇನ್ನು ೨-೩ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ ಬೆಂಗಳೂರು ಅಭಿವೃದ್ಧಿಗೂ ಗಮನ ನೀಡುತ್ತೇವೆ ಬಿಜೆಪಿಗಿಂತ ವಿಭಿನ್ನವಾಗಿ ಕೆಲಸ ಮಾಡುವ ಮೂಲಕ ಜನರ ವಿಶ್ವಾಸವನ್ನೂ ಉಳಿಸಿಕೊಂಡು ಹೋಗುವ ಕೆಲಸ ಮಾಡುವುದಾಗಿ ಹೇಳಿದರು.