
ದಾವಣಗೆರೆ, ಮಾ. 13; ಉದ್ಯಮಿಗಳಾದ ಅಥಣಿ ವೀರಣ್ಣರಿಗೆ ಗೌರವ ಡಾಕ್ಟರೇಟ್ ಬಂದಿರುವುದು ನಮ್ಮ ಅನ್ನದಾನಿಶ್ವರ ಮಠಕ್ಕೆ ನೀಡಿದಷ್ಟು ಸಂತೋಷವಾಗಿದೆ ಎಂದು ಹಾಲಕೆರೆ ಸಂಸ್ಥಾನ ಮಠದ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.ಇಲ್ಲಿನ ದೇವರಾಜ ಅರಸ್ ಬಡಾವಣೆಯ ಅನ್ನದಾನೀಶ್ವರ ಮಠದಲ್ಲಿ ಶ್ರೀ ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ನಿಂದ ದಾವಣಗೆರೆ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಟ್ರಸ್ಟ್ ಅಧ್ಯಕ್ಷ ರಾದ ಅಥಣಿ ವೀರಣ್ಣನವರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಅಥಣಿ ವೀರಣ್ಣನವರು ಶ್ರೀ ಮಠದ ಅಧ್ಯಕ್ಷರಾಗಿ ಅಲ್ಲದೇ, ಹಲವಾರು, ಮಠ, ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಯೊಂದಿಗೆ ಹಿರಿಯ ಲೆಕ್ಕ ಪರಿಶೋಧಕರಾಗಿ ಸಮಾಜ ಮುಖಿ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ ಎಂದರು.ಶ್ರೀ ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ನಿಂದ ಇಲ್ಲಿ ಕಲ್ಯಾಣ ಮಂಟಪ ಕಟ್ಟುವ ಯೋಜನೆ ನಮ್ಮೆಲ್ಲರ ಉದ್ದೇಶವಾಗಿದೆ. ಈ ಹಿಂದೆ ಕಲ್ಯಾಣ ಮಂಟಪ ಕಟ್ಟಲು ವಾಗ್ದಾನ ಮಾಡಿದಂತೆ ದಾನಿಗಳು ಸಹಾಯ ಮಾಡಬೇಕು. ಟ್ರಸ್ಟ್ ಅಧ್ಯಕ್ಷರಾದ ಡಾ.ಅಥಣಿ ವೀರಣ್ಣನವರ ಮಾರ್ಗದರ್ಶನದಲ್ಲಿ ಟ್ರಸ್ಟ್ ನ ಅಡಿವೆಪ್ಪ ನವರು, ವೀರಪ್ಪ ಎಂ. ಭಾವಿ ಎಲ್ಲರೂ ಮುಂದಾಳತ್ವ ವಹಿಸಿಕೊಂಡು ದಾನಿಗಳಿಂದ ಧನ ಸಹಾಯ ಪಡೆದು ಕಟ್ಟಡ ಕಾರ್ಯಕ್ರಮ ಆರಂಭಿಸಬೇಕೆಂದು ಕರೆ ನೀಡಿದರು.ನಮ್ಮ ಶ್ರೀಮಠವು ಜಾತಿ, ಮತ, ಪಥ ಮೀರಿದ ಮಠವಾಗಿದ್ದು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ನಮ್ಮ ಹಿರಿಯ ಗುರುಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ, ಪ್ರಸಾದ ಕ್ಕೆ ಒತ್ತುನೀಡಿ ಮಠವನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ನಾವು ನೀವೆಲ್ಲರೂ ಸೇರಿ ಇನ್ನೂ ಎತ್ತರಕ್ಕೆ ಬೆಳೆಸೋಣ ಎಂದು ಹೇಳಿದರು.ಸನ್ಮಾನ ಸ್ವೀಕರಿಸಿದ ಡಾ. ಅಥಣಿ ವೀರಣ್ಣ ಮಾತನಾಡಿ, ಶ್ರೀಗಳಿಂದ ನನಗೆ ಇಲ್ಲಿ ಗೌರವಿಸಿರುವುದು ನನಗೆ ಸಂತೋಷ ತಂದಿದೆ. ಶ್ರೀಗಳ ಭಕ್ತರ ಆಶಯದಂತೆ ಇಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸುಮಾರು 2 ಕೋಟಿ ರು.ಅವಶ್ಯಕತೆ ಇದೆ. ಶ್ರೀಗಳು ದಾನಿಗಳ ಮನೆಗೆ ಪಾದಪೂಜೆಗೆ ಬರುವುದಾಗಿ ತಿಳಿಸಿದ್ದಾರೆ. ಕಲ್ಯಾಣ ಮಂಟಪ ಆಗಲೇ ಬೇಕು. ಈ ಕಲ್ಯಾಣ ಮಂಟಪ ಬಡವ, ಮಧ್ಯಮ ವರ್ಗದ ಜನತೆಗೆ ಅನುಕೂಲವಾಗಬೇಕು. ದಾನಿಗಳ ಸಹಕಾರ ದಿಂದ ಕಲ್ಯಾಣ ಮಂಟಪ ಕಟ್ಟಿಸೋಣ. ಕಡಿಮೆ ಆದರೆ ಸಾಲವನ್ನು ತೆಗೆದುಕೊಂಡು ಕಟ್ಟಿಸೋಣ ಎಂದರು.ಕಾರ್ಯಕ್ರಮದಲ್ಲಿ ದಾವಣಗೆರೆ ಅರ್ಬನ್ ಬ್ಯಾಂಕ್ನ ಉಪಾದ್ಯಕ್ಷ ಅಂದನೂರು ಮುಪ್ಪಣ್ಣ, ನಿರ್ದೇಶಕ ದೇವರಮನಿ ಶಿವಕುಮಾರ, ಉದ್ಯಮಿಗಳಾದ ವೈ.ಬಿ.ಸತೀಶ,ಜಿ ಎಸ್. ಉಳವಯ್ಯ, ಟ್ರಸ್ಟ್ ಉಪಾದ್ಯಕ್ಷ ಅಮರಯ್ಯ ಗುರುವಿನಮಠ, ಕೆ ಟಿ ಮಹಾಲಿಂಗೇಶ್, ಅಡಿವೆಪ್ಪ ಸೇರಿದಂತೆ ಇತರರು ಇದ್ದರು. ಈ ಸಂದರ್ಭದಲ್ಲಿ ಕಲ್ಯಾಣ ಮಂಟಪ ಕಟ್ಟಡಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಗೌರವಿಸಲಾಯಿತು.ಹಿರಿಯ ಪತ್ರಕರ್ತ, ಇಂದಿನ ಸುದ್ದಿ ಸಂಪಾದಕ ವೀರಪ್ಪ ಎಂ.ಭಾವಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.