
ಬೆಂಗಳೂರು, ಮಾ.೧೮-ರಾಜಧಾನಿ ಬೆಂಗಳೂರಿನ ಹೃದಯಭಾಗದಲ್ಲಿ ಜನ ಮೂಗು ಮುಚ್ಚಿ ಓಡಾಡಬೇಕಾದ ಸ್ಥಿತಿಯಲ್ಲಿದ್ದ ಶಿವಾಜಿನಗರಕ್ಕೆ ಹೊಸ ರೂಪ ನೀಡಲಾಗಿದ್ದು, ಇಂದು ಅದ್ದೂರಿ ಯಾಗಿ ಚಾಂದಿನಿ ಚೌಕ್ ನಲ್ಲಿ ಹಬ್ಬ ಆಚರಣೆ ಮಾಡಲಾಗುತ್ತಿದೆ.
ಸ್ಮಾರ್ಟ್ ಸಿಟಿ ಯೋಜನೆ, ಶಾಸಕರ ಪ್ರದೇಶಾ
ಭಿವೃದ್ಧಿ ನಿಧಿ ಮತ್ತು ಬಿಬಿಎಂಪಿ ಅನುದಾನದಡಿ ೭ ಕೋಟಿ ಖರ್ಚು ಮಾಡಲಾಗಿದ್ದು, ಹೊಸ
ತನದೊಂದಿಗೆ ಜನರ ಮನಸೂರೆಗೊಳ್ಳುವ ತಾಣವಾಗಿ ಬದಲಾಗಿದೆ.
೧೨೦ ಮೀಟರ್ ಉದ್ದ ಮತ್ತು ೧೩ ಮೀಟರ್ ಅಗಲದ ಜಾಗದಲ್ಲಿ ೮ ಪ್ಲಾಜಾಗಳನ್ನು ನಿರ್ಮಿಸಲಾಗಿದೆ. ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ಎದುರಿನ ಮೊದಲ ಪ್ಲಾಜಾದಲ್ಲಿ ಎರಡು ಕಾರಂಜಿಗಳನ್ನು ನಿರ್ಮಿಸಿರುವುದು ವಿಶೇಷ.
ಅಲ್ಲಲ್ಲಿ ಕಾರಂಜಿಗಳು, ಆಸನ ವ್ಯವಸ್ಥೆಗಳು, ಶೌಚಾಲಯಗಳು, ವಾಹನ ನಿಲುಗಡೆ ತಾಣ, ಪೊಲೀಸ್ ಚೌಕಿ ನಿರ್ಮಾಣವಾಗಿವೆ. ಸದ್ಯ ಆಲಂಕಾರಿಕ ವಿದ್ಯುತ್ ದೀಪಗಳೊಂದಿಗೆ ಚಾಂದಿನಿ ಚೌಕ್ ನೋಡುಗರ ಗಮನ ಸೆಳೆಯುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ರಿಜ್ವಾನ್ ಆರ್ಷದ್, ಶಿವಾಜಿನಗರದ ಕೇಂದ್ರ ಸ್ಥಾನ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದಾಗಿತ್ತು. ಐತಿಹಾಸಿಕ ತಾಣಕ್ಕೆ ವಿಶೇಷ ರೂಪ ನೀಡಲಾಗಿದೆ. ಪ್ರವಾಸಿ ತಾಣವನ್ನಾಗಿ ಮಾಡಲಾಗಿದೆ. ಮಳೆ ನೀರು ರಸ್ತೆ, ಅಂಗಡಿಗಳಿಗೆ ಹರಿಯುವುದನ್ನು ತಪ್ಪಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ ಎಂದರು.
ರಸೆಲ್ ಮಾರುಕಟ್ಟೆಗೆ ಬಣ್ಣ ಬಳಿಯಲಾಗಿದ್ದು, ಹೊರಾಂಗಣ ಕಂಗೊಳಿಸುತ್ತಿದೆ. ಸಂಪೂರ್ಣವಾಗಿ ಮಾರುಕಟ್ಟೆ ನವೀಕರಣಕ್ಕೆ ನೀಡಿದ್ದ ೧೬ ಕೋಟಿಯನ್ನು ಸರ್ಕಾರ ವಾಪಸ್ ಪಡೆದುಕೊಂಡಿತು. ಹೊರಾಂಗಣಕ್ಕೆ ಬಣ್ಣ ಬಳಿದು ಸಣ್ಣಪುಟ್ಟ ರಿಪೇರಿ ಮಾಡಿಸಲಾಗಿದೆ. ಮುಂದಿನ ವರ್ಷ ರಸೆಲ್ ಮಾರುಕಟ್ಟೆಯ ಚಿತ್ರಣವನ್ನೇ ಬದಲಿಸಲಾಗುವುದು ಎಂದು ಅವರು ಹೇಳಿದರು.
ಐತಿಹಾಸಿಕ ಬಾವಿ: ಬಿಬಿಎಂಪಿ ಮಾಜಿ ಸದಸ್ಯ ಶಕೀಲ್ ಅಹ್ಮದ್ ಮಾತನಾಡಿ, ಚಾಂದಿನಿ ಚೌಕ್ ಬಳಿ ೩೫ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸುರಕ್ಷತೆಗೂ ಒತ್ತು ನೀಡಲಾಗಿದೆ. ಮತ್ತೊಂದು ಬದಿಯಲ್ಲಿ ೫೦ ಅಡಿ ಎತ್ತಡದ ಗಡಿಯಾರ ಗೋಪುರ ತಲೆ ಎತ್ತಿ ನಿಂತಿದೆ.
೨೫೦ ವರ್ಷಕ್ಕೂ ಹಳೆಯದಾದ ಬಾವಿಯೊಂದಿದ್ದು, ಅದರ ಸುತ್ತಲೂ ಕುಳಿತು ಕಾಲ ಕಳೆಯಲು ಜಾಗ ಸೃಷ್ಟಿಸಲಾಗಿದೆ. ಆಕಸ್ಮಿಕವಾಗಿ ಬಾವಿಗೆ ಬಿದ್ದರೂ ಯಾವುದೇ ಅವಘಡ ಆಗದಂತೆ ಎರಡು ಅಡಿ ಆಳದಲ್ಲಿ ಗ್ರಿಲ್ಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇಂದು ಶಿವಾಜಿನಗರ ಹಬ್ಬ…!
ನಗರದ ವೈವಿಧ್ಯ ಸಂಭ್ರಮಿಸುವ ಮತ್ತು ವಿವಿಧ ಸಮುದಾಯಗಳ ಜನರನ್ನು ಒಟ್ಟುಗೂಡಿಸುವ ಸಾಂಸ್ಕೃತಿಕ ಹಬ್ಬವನ್ನು ನವೀಕರಣಗೊಂಡಿರುವ ಚಾಂದಿನಿ ಚೌಕ್ನಲ್ಲಿ ಇಂದು ಆಚರಣೆ ಮಾಡಲಾಗುತ್ತಿದೆ. ಪ್ರಸಿದ್ಧ ಕಲಾವಿದರಿಂದ ಕಲಾ ಪ್ರದರ್ಶನ, ಇತರ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ.
ಚಾಂದಿನಿ ಚೌಕ್ ರಸ್ತೆ ಸಿಹಿತಿಂಡಿಗಳ ಅಂಗಡಿಗಳು ಮತ್ತು ವಾಹನಗಳ ಬಿಡಿಭಾಗಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇಲ್ಲಿಗೆ ಬರುವುದೇ ಕಷ್ಟವಾಗಿತ್ತು.ಇದೀಗ ಬದಲಾವಣೆಯಿಂದ ಸಂತಸ ತಂದಿದೆ. ಮಳೆ ನೀರಿನ ಸಮಸ್ಯೆಯೂ ಕಂಡುಬರುತ್ತಿಲ್ಲ ಎಂದು ರಸೆಲ್ ಮಾರ್ಕೆಟ್ ಮಳಿಗೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರೀಸ್ ಚೌಧರಿ ತಿಳಿಸಿದರು.