
ಶಿವಮೊಗ್ಗ, ಎ. 12: ‘ತಾವು ಈಗಲೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ
ಸ್ಪರ್ಧಾಕಾಂಕ್ಷಿಯಾಗಿದ್ದೆನೆ. ಯಾವ ಪಕ್ಷದಿಂದ ಎಂಬುವುದು ಇಷ್ಟರಲ್ಲಿಯೇ
ಸ್ಪಷ್ಟವಾಗಲಿದೆ’ ಎಂದು ಬಿಜೆಪಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್
ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಯಾವ ಪಕ್ಷದಿಂದ ತಾವು ಸ್ಪರ್ಧಾಕಾಂಕ್ಷಿ ಎಂಬುವುದನ್ನು ಸ್ಪಷ್ಟವಾಗಿ ಹೇಳದ ಆಯನೂರು
ಮಂಜುನಾಥ್, ‘ಶಿವಮೊಗ್ಗ ಕ್ಷೇತ್ರಕ್ಕೆ ಯಾವ ಪಕ್ಷಗಳ ಅಭ್ಯರ್ಥಿಗಳ ಹೆಸರು
ಪ್ರಕಟವಾಗಿಲ್ಲ. ಕಾದು ನೋಡಿ ಗೊತ್ತಾಗುತ್ತದೆ’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ
ಹೇಳಿದ್ದಾರೆ.
ಕೆ.ಎಸ್.ಈಶ್ವರಪ್ಪಅವರ ವಿರುದ್ದ ತಮಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ.
ಆದರೆ ಅವರ ಸ್ಪರ್ಧೆಗೆ ತಮ್ಮ ಆಕ್ಷೇಪವಿತ್ತು. ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ
ಹೊಂದಿರುವುದರಿಂದ, ತಮ್ಮ ನಿಲುವಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ತಾವು ಈಗಲೂ
ಶಿವಮೊಗ್ಗ ನಗರ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿದ್ದೆನೆ. ಇಷ್ಟರಲ್ಲಿಯೇ ಎಲ್ಲವೂ
ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಮುಂದುವರಿದ ಗೊಂದಲ: ಸುದ್ದಿಗೋಷ್ಠಿಯುದ್ದಕ್ಕೂ ಆಯನೂರು ಮಂಜುನಾಥ್, ತಾವು ಬಿಜೆಪಿ
ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಕುರಿತಂತೆ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ಯಾವ
ಪಕ್ಷದಿಂದಲ ಟಿಕೆಟ್ ನಿರೀಕ್ಷೆಯಲ್ಲಿರುವ ಬಗ್ಗೆಯೂ ಸ್ಪಷ್ಟ ಅಭಿಪ್ರಾಯ
ವ್ಯಕ್ತಪಡಿಸಲಿಲ್ಲ.