(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.08: ಮಹಾನ್ ಮಾಕ್ರ್ಸ್ ವಾದಿ ಚಿಂತಕರು, ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಎ.ಐ.ಎಂ.ಎಸ್.ಎಸ್ ಜಿಲ್ಲಾ ಸಮಿತಿ ವತಿಯಿಂದ ಎ.ಐ.ಎಂ.ಎಸ್.ಎಸ್. ಕಛೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ(ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ರಾಧಕೃಷ್ಣ ಉಪಾಧ್ಯಾಯ ರವರು ಮಾತನಾಡಿ, ಭಾರತದ ನೆಲದಲ್ಲಿ ನೈಜ ಕಮ್ಯುನಿಸ್ಟ್ ಪಕ್ಷ ಎಸ್.ಯು.ಸಿ.ಐ(ಸಿ) ಸ್ಥಾಪನೆ ಮಾಡಿದ ಕಾಮ್ರೇಡ್ ಶಿವದಾಸ್ ಘೋಸ್ ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಇಡೀ ದೇಶದಾದ್ಯಂತ ವರ್ಷಪೂರ್ತಿ ಅತ್ಯಂತ ಗೌರವದಿಂದ ಆಚರಿಸಲಾಗುತ್ತಿದೆ.
ತಮ್ಮ 13ನೇ ವಯಸ್ಸಿಗೆ ಸ್ವಾತಂತ್ರ್ಯ ಹೋರಾಟದ ಕಣದಲ್ಲಿ ಧುಮುಕಿದ ಕಾಮ್ರೇಡ್ ಶಿವದಾಸ್ ಘೋಷ್, ಕ್ರಾಂತಿಕಾರಿಗಳ ಗುಂಪಾದ ಅನುಶೀಲನ್ ಸಮಿತಿಯಲ್ಲಿ ಸಕ್ರಿಯರಾಗಿದ್ದರು. ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. 3 ವರ್ಷಗಳ ಕಾಲ ಸೆರೆಮನೆ ವಾಸವನ್ನು ಸಹ ಅನುಭವಿಸಿದರು, ಆದರೆ ಲಕ್ಷಾಂತರ ಶೋಷಿತ ಜನರ ತ್ಯಾಗ ಬಲಿದಾನದ ಫಲವಾಗಿ ದೊರೆಯುತ್ತಿರುವ ಸ್ವಾತಂತ್ರ್ಯವೂ ಟಾಟಾ, ಬಿರ್ಲಾ ಗಳಂತಹ ಬಂಡವಾಳಶಾಹಿಗಳ ಕೈವಶವಾಗುತ್ತಿರುವುದನ್ನು ಕಂಡು ಅವರ ಮನಸ್ಸು ವೇದನೆಗೊಳ ಪಟ್ಟಿತು ಸ್ವಾತಂತ್ರ್ಯ ಚಳುವಳಿಯಲ್ಲಿ ಸಂಧಾನ ಪರವಾದ ನಾಯಕತ್ವವು ಮೆಲುಗೈ ಪಡೆದ ಪರಿಣಾಮವಾಗಿ ರಾಜಕೀಯ ಅಧಿಕಾರವನ್ನು ಈ ದೇಶದ ಶೋಷಕ ಬಂಡವಾಳಶಾಹಿ ವರ್ಗ ಕಬಳಿಸಿತು ರಾಜಿ ರಹಿತ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ರಂತವರ ಕನಸಿನ ಶೋಷಣಾ ರಹಿತ ಸಮಾಜವಾದ, ಕನಸಾಗಿಯೇ ಉಳಿಯಿತು.
ಬಂಡವಾಳ ಶಾಹಿ ವ್ಯವಸ್ಥೆಯನ್ನು ತೊಲಗಿಸಿ ಸಮಾಜವಾದವು ಈ ದೇಶದ ನೆಲದಲ್ಲಿ ಸ್ಥಾಪಿಸಲು ನಿಜವಾದ ಕಮ್ಯುನಿಸ್ಟ್ ಪಕ್ಷದ ಅವಶ್ಯಕತೆಯನ್ನು ಮನಗಂಡು, ಅದನ್ನು ಕಟ್ಟುವ ಅತ್ಯಂತ ಪರಿಶ್ರಮದಾಯಕ ಹೋರಾಟವನ್ನು ಕಾಮ್ರೆಡ್ ಶಿವದಾಸ್ ಘೋಷ್ ರವರು ಕೈಗೊಂಡರು ಮಾಕ್ರ್ಸ್ವಾದಿ ವಿಜ್ಞಾನವನ್ನು ಈ ದೇಶದ ವಿಶಿಷ್ಟ ಪರಿಸ್ಥಿತಿಗೆ ಅಳವಡಿಸಿ ಜೀವನದ ಎಲ್ಲಾ ವಿಷಯಗಳನ್ನು ಒಳಗೊಂಡ ಒಂದು ಸಮಗ್ರವಾದ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು.
ಬೆರಳೆಣಿಕೆಯ ಕಾಮ್ರೇಡ್ರೊಂದಿಗೆ ಸೇರಿ 1948 ಏಪ್ರಿಲ್ 24ರಂದು ಈ ನೆಲದಲ್ಲಿ ಒಂದು ನೈಜ ಕಮ್ಯುನಿಸ್ಟ್ ಪಕ್ಷ ಸ್ಥಾಪನೆ ಮಾಡಿ ಒಂದು ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು ಎಂದರು.
ರಾಜ್ಯ ಉಪಾಧ್ಯಕ್ಷರಾದ ಎಂ.ಎನ್.ಮಂಜುಳಾರವರು ಮಾತನಾಡುತ್ತಾ, “ಮಹಿಳೆಯರಿಗೆ ವಿಮುಕ್ತಿಯನ್ನು ಯಾರೂ ಉಡುಗೊರೆಯಾಗಿ ನೀಡಲು ಸಾಧ್ಯವಿಲ್ಲ. ಅದನ್ನು ಅವರು ಹೋರಾಟದ ಮೂಲಕ ಪಡೆಯಬೇಕು”. “ದೇಶದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಗಾಗಿ ನಡೆಯುವಕಾರ್ಮಿಕರ ಹೋರಾಟದೊಂದಿಗೆ ಮಹಿಳೆಯರ ಹೋರಾಟ ಬೆಸೆದುಕೊಳ್ಳಬೇಕು”.ಎಂದು ಹೇಳಿದರು.
ವೇದಿಕೆ ಮೇಲೆ ಎಐಎಂಎಸ್ಎಸ್ನ ಮಾಜಿ ಜಿಲ್ಲಾಧ್ಯಕ್ಷೆ ಎ.ಶಾಂತಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷೆ ಈಶ್ವರಿ.ಕೆ.ಎಂ ವಹಿಸಿಸಿದ್ದರು. ಹಾಗೂ ವಿದ್ಯಾ, ಗಿರಿಜಾ, ಗುಂಡಮ್ಮ, ಹನುಮಂತಮ್ಮ, ನಾಗಮ್ಮ, ಯಾಸ್ಮಿನ್ ಇನ್ನೂ ಮುಂತಾದ ಎ.ಐ.ಎಂ.ಎಸ್.ಎಸ್ನ ಸದಸ್ಯರು ಭಾಗವಹಿಸಿದ್ದರು.