
ಸಂಜೆವಾಣಿ ವಾರ್ತೆ
ಸಂಡೂರು :ಸೆ: 3: ಸಂಡೂರು ನಾಗರೀಕತೆಯ ಕಾಲವಾದ ಶಿಲಾಯುಗದಲ್ಲಿಯೂ ಸಂಡೂರಿನ ಇದರ ಉಲ್ಲೇಖಗಳನ್ನು ಕಾಣುತ್ತೇವೆ, ಕಬ್ಬಿಣದ ಆಯುಧಗಳನ್ನು ತಯಾರಿಸಿದ ಕೇಂದ್ರ ಈ ನಾಡು ಸ್ಕಂದನಾಡು ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿ ತಿಳಿಯುವ ಮೂಲಕ ನಮ್ಮ ಸಂಸ್ಕೃತಿಯನ್ನು ಮನಗಾಣಬೇಕು ಎಂದು ನಿವೃತ್ತ ಪ್ರಾಂಶುಪಾಲರು, ಕಸಾಪ ಮಾಜಿ ಅಧ್ಯಕ್ಷರು ಅದ ಡಾ. ವೃಷಬೇಂದ್ರ ಆಚಾರ್ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್.ಎಸ್.ಎಸ್., ರೆಡ್ ಕ್ರಾಸ್, ಸಾಂಸ್ಕೃತಿಕ ಘಟಕಗಳ ಮುಕ್ತಾಯ, ವಿದ್ಯಾರ್ಥಿಗಳ ಬೀಳ್ಕೊಡಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ ಸಂಡೂರು 6ನೇ ಶತಮಾನದಲ್ಲಿ ಗುಪ್ತರ ಕಾಲದಲ್ಲಿಯೂ ಸಹ ಹೆಸರುವಾಸಿಯಾಗಿದೆ, ಸ್ಕಂದಗುಪ್ತ ಈ ಪ್ರದೇಶದ ಆರಾಧ್ಯ ದೈವವಾದ ಶ್ರೀ ಕುಮಾರಸ್ವಾಮಿಯ ಅರಾಧಕ, ಇಡೀ ನಾಡಿಗೆ ರಕ್ಷಕನಾಗಿ, ಒಡೆಯನಾಗಿ ಇದ್ದವನು ಎನ್ನುವ ಅಂಶವನ್ನು ನಾವು ಐತಿಹಾಸಿಕವಾಗಿ ಮನಗಾಣಬೇಕು, ಪುರಾಣಗಳಲ್ಲಿಯೂ ಸಹ ಉಲ್ಲೇಖವನ್ನು ಕಾಣುತ್ತೇವೆ, ರಾಮಾಯಣದಲ್ಲಿ ವಾಲಿ ಸುಗ್ರೀವ ಕದನಕ್ಕೆ ಇಲ್ಲಿಂದಲೇ ಆಯುಧಗಳ ಸರಬರಾಜು ಎನ್ನುವ ಅಂಶ ಬರುತ್ತದೆ, ಅದ್ದರಿಂದ ಸಂಡೂರು ಐತಿಹಾಸಿಕವಾಗಿ, ಪೌರಾಣಿಕವಾಗಿ ನಮ್ಮ ಮಹಾನ್ ಕೃತಿ ರಾಮಾಯಣದಲ್ಲಿಯೂ ಸಹ ಇದರ ಉಲ್ಲೇಖವಿದ್ದು ವಿದ್ಯಾರ್ಥಿಗಳು ತಿಳಿಯಬೇಕು, ಅಲ್ಲದೆ ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಸಾಧಕರಾಗಿ ಎಂದು ಕರೆನೀಡಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕರು, ಸಿ.ಡಿ.ಸಿ. ಸದಸ್ಯರು ಅದ ಸಿ.ಎಂ. ಸಿಗ್ಗಾವಿ ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರದ ಜೀವನ ಎನ್ನುತ್ತೇವೆ, ಇಂದು ನಿಮಗೆ ಬಂಗಾರವಾಗಿ ಕಾಣುತ್ತದೆ, ಅದರೆ ಮುಂದಿನ ಹಂತದಲ್ಲಿ ಅನೇಕ ಅಡೆತಡೆಗಳು ಬರುತ್ತವೆ ಅವುಗಳನ್ನು ದಾಟಿ ಸಾಧನೆ ಶಿಖರವೇರಿದಾಗ ನಿಮ್ಮ ಬದುಕು ಬಂಗಾರವಾಗುತ್ತದೆ, ಅದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಸಮಾನತೆಯನ್ನು ರೂಢಿಸಿಕೊಳ್ಳಬೇಕು, ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ಉತ್ತಮ ಸ್ಥಾನಕ್ಕೇರಿ ಎಂದರು.
ಸಿಡಿಸಿ ಸದಸ್ಯರಾದ ಎಸ್.ವಿ.ಹಿರೇಮಠ ಅವರು ಮಾತನಾಡಿ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಬೀಳ್ಕೊಡಿಗೆ ನೋಡಿದಾಗ ನನ್ನ ಬಾಲ್ಯ ನೆನಪಿಗೆ ಬರುತ್ತದೆ, ಕಾಲೇಜಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಿರಂತರವಾಗಿ ಪ್ರಯತ್ನದಿಂದ ನೀಡಲಾಗುತ್ತಿದೆ, ನೂತನವಾಗಿ ಅಡಿಟೋರಿಯಂ ಬೇಡಿಕೆ ಇದ್ದು ಅದನ್ನು ಶೀಘ್ರವೇ ಸ್ಥಾಪಿಸಲಾಗುವುದು, ವೇದಿಕೆಯಲ್ಲಿರುವ ಇಬ್ಬರೂ ಗುರುಗಳು ನನಗೆ ನೀಡಿದ ಶಿಕ್ಷಣದಿಂದ ಇಂದು ನಾವು ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಸಾಧ್ಯವಾಯಿತು, ಅದ್ದರಿಂದ ನೀವು ಸಹ ಉತ್ತಮ ಶಿಕ್ಷಣ ಪಡೆದು ಉತ್ತಮಸ್ಥಾನಕ್ಕೇರಿ ಎಂದರು.
ಕಸಾಪ ಸದಸ್ಯರು, ಸಿಡಿಸಿ ಸದಸ್ಯರಾದ ಹೆಚ್.ವೀರೇಶ್ ಅವರು ಮಾತನಾಡಿ ಬರೀ ಸರ್ಕಾರಿ ಹುದ್ದೆಗೆ ಮಾತ್ರ ವಿದ್ಯೆಯಲ್ಲಿ, ಸ್ವಂತ ಉದ್ಯಮಿಗಳಾಗಬೇಕು ಅಂತಹ ಕಲಿಕೆಯನ್ನು ಕಲಿಯಬೇಕು, ನಮ್ಮ ತಂದೆ ಸಾಮಾನ್ಯ ವ್ಯಾಪಾರದಿಂದ ಬಹುದೊಡ್ಡ ಗುತ್ತಿಗೆದಾರರಾಗುವ ಮೂಲಕ ಬೆಳೆದಿದ್ದೇವೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಹೊಸತನವನ್ನು ಹುಡುಕಬೇಕು ಅದಕ್ಕೆ ಕಲಿಕೆ ಬಹುಮುಖ್ಯ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲರಾದ ಡಾ. ಹೆಚ್.ಬಸವರಾಜ ಅವರು ಮಾತನಾಡಿ ವಿದ್ಯಾರ್ಥಿಜೀವನ ಎಲ್ಲಾ ರೀತಿಯ ತಿರುವುಗಳನ್ನು ಪಡೆದುಕೊಳ್ಳುವ ಹಂತ ಅದ್ದರಿಂದ ಸಂಡೂರಿನ ಋಣತೀರಿಸುವ ಅವಕಾಶ ನನಗೆ ಬಂದಿದೆ ಎಂದರೆ ನಾನು ಇಲ್ಲಿಯ ಸ್ನಾತಕೋತ್ತರ ಕೇಂದ್ರದಲ್ಲಿ ಅಭ್ಯಾಸ ಮಾಡಿದ್ದು, ನೀವು ಸಹ ಉನ್ನತ ಶಿಕ್ಷಣ ಪಡೆಯಬೇಕು ಎಂದರು.
ಸಮಾರಂಭದಲ್ಲಿ ಉಪನ್ಯಾಸಕ ಬಸವರಾಜ ಬಣಕಾರ ನಿರ್ವಹಿಸಿದರು, ಕನ್ನಡ ವಿಭಾಗದ ಮುಖ್ಯಸ್ಥರಾದ ಈ.ಜಿ. ರೇಖಾ ಅವರು ವರದಿವಾಚನ ಮಾಡಿದರು, ನಿರ್ವಾಹಣಾ ವಿಭಾಗದ ಮುಖ್ಯಸ್ಥರಾದ ಮಹೇಶ್ ಸ್ವಾಗತಿಸಿದರು, ಉಪನ್ಯಾಸಕ ಗೌತಮ್ ವಂದಿಸಿದರು, ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಉಪನ್ಯಾಸಕ ಅರುಣಕುಮಾರ್ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು, ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಎಲ್ಲಾ ಸಿಬ್ಬಂದಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.