ಕೋಲಾರ,ಜು.೧೮- ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಉಪನ್ಯಾಸಕರಾಗಿ ಪದೋನ್ನತಿ ಪಡೆದ ಶಿಕ್ಷಕರಿಗೆ ಕಾಲಮಿತಿ ಬಡ್ತಿ ನೀಡದ ಕಾರಣ ಭಾರಿ ಪ್ರಮಾಣದಲ್ಲಿ ವೇತನ ತಾರತಮ್ಯವಿದ್ದು, ಇದನ್ನು ಸರಿಪಡಿಸುವಂತೆ ವಿದಾನಪರಿಷತ್ನಲ್ಲಿ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು.
ಪದೋನ್ನತಿ ಪಡೆದ ಶಿಕ್ಷಕರಿಗೆ ೧೦, ೧೫, ೨೦ ವರ್ಷಗಳ ಕಾಲಮಿತಿ ಬಡ್ತಿ ನೀಡದ ಕಾರಣ ಬಡ್ತಿ ನಿರಾಕರಿಸಿದ ಶಿಕ್ಷಕರಿಗೂ ಇವರಿಗೂ ನಡುವೆ ೧೫ ಸಾವಿರದಿಂದ ೨೦ ಸಾವಿರ ರೂ ಆರ್ಥಿಕ ನಷ್ಟ ಅನುಭವಿಸುವಂತಾಗಿದ್ದು, ಈ ಗಂಭೀರ ವಿಚಾರವನ್ನು ಶಿಕ್ಷಣ ಸಚಿವರು ಗಮನಿಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಣ ಸಚಿವರು ಇದಕ್ಕೆ ಉತ್ತರಿಸಿ, ಸರ್ಕಾರದ ೧೪-೬-೨೦೧೨ರ ಆದೇಶದಲ್ಲಿ ಪದೋನ್ನತಿ ಪಡೆಯದೇ ಇರುವ ಶಿಕ್ಷಕರಿಗೆ ಮಾತ್ರವೇ ಕಾಲಮಿತಿ ಬಡ್ತಿ ಮಂಜೂರಾತಿಗೆ ಅವಕಾಶ ನೀಡಲಾಗಿದೆ, ಬಡ್ತಿ ಪಡೆದಿರುವ ಶಿಕ್ಷಕರು ಕಾಲಮಿತಿ ವೇತನ ಬಡ್ತಿಗೆ ಅರ್ಹರಾಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈ ತಾರತಮ್ಯ ನಿವಾರಣೆಗೆ ಸಂಬಂಧಿಸಿದಂತ ಎ ೬ನೇ ವೇತನ ಆಯೋಗದ ಶಿಫಾರಸ್ಸಿನಂತೆ ಈ ಗೊಂದಲ ಹೋಗಲಾಡಿಸುವ ಕುರಿತು ಆರ್ಥಿಕ ಇಲಾಖೆಗೆ ಕಡತ ಕಳುಹಿಸಿದ್ದು, ಆರ್ಥಿಕ ಇಲಾಖೆ ಷರತ್ತುಗಳಡಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.
ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಪದೋನ್ನತಿ ಪಡೆಯುವುದರಿಂದ ಅವರು, ಪದೋನ್ನತಿ ಪಡೆಯದವರು ಪಡೆಯುವ ಕಾಲಮಿತಿ ಬಡ್ತಿಗಳ ನಡುವೆ ಇರುವ ವೇತನ ವ್ಯತ್ಯಾಸವನ್ನು ತಾರತಮ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಪದೋನ್ನತಿ ಪಡೆದ ನಂತರ ಅವರು ಕಾರ್ಯನಿರ್ವಹಿಸುತ್ತಿರುವ ವೃಂದ ಮತ್ತು ಅದಕ್ಕೆ ನಿಗಧಿಪಡಿಸಲಾದ ವೇತನ ಶ್ರೇಣಿ ಪರಸ್ಪರ ಭಿನ್ನವಾಗಿದ್ದು, ಅವುಗಳನ್ನು ಹೋಲಿಕೆ ಮಾಡಲು ಬರುವುದಿಲ್ಲ ಎಂದು ತಿಳಿಸಿದ ಅವರು ಹಿರಿಯ ಶಿಕ್ಷಕರ ವೇತನವನ್ನು ಕಿರಿಯ ಶಿಕ್ಷಕರ ವೇತನದ ಸಮಕ್ಕೆ ಎತ್ತರಿಸುವ ಪ್ರಮೇಯ ಉದ್ಬವಿಸುವುದಿಲ್ಲ ಎಂದು ಸಚಿವರು ಉತ್ತರ ನೀಡಿದರು.