ಶಿಕ್ಷಕರನ್ನು ಬಿ.ಎಲ್.ಒ. ಕರ್ತವ್ಯದಿಂದ ಮುಕ್ತಗೊಳಿಸಲು ಒತ್ತಾಯಿಸಿ ಮನವಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.30: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ತಾ.ಘಟಕದ ಪದಾಧಿಕಾರಿಗಳು, ಬಿ.ಎಲ್.ಒ. ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ತಾ.ಅಧ್ಯಕ್ಷ ಹೆಚ್.ಜೆ.ಶ್ರೀಧರ ಮಾತನಾಡಿ ತಾಲೂಕಿನಲ್ಲಿ ಶೇ.60ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಪ್ರಸ್ತುತ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು 60-70 ಶಿಕ್ಷಕರು ತಾಲೂಕಿನಿಂದ ಹೊರಗೆ ವರ್ಗಾವಣೆ ಹೊಂದುವ ಸಾಧ್ಯತೆಗಳಿರುತ್ತವೆ, ಅಲ್ಲದೆ 25-30ಶಾಲೆಗಳಲ್ಲಿ ಒಬ್ಬ ಶಿಕ್ಷಕರು ಸಹ ಇಲ್ಲದೆ ಶಿಕ್ಷಕರ ಕೊರತೆ ಇರುತ್ತದೆ.  ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶೇ.40ರಷ್ಟು ಶಿಕ್ಷಕರು ಪಾಠ ಭೋದನೆಯನ್ನು ಪೂರ್ಣ ಪ್ರಮಾಣದಲ್ಲಿ ನೀಡಲು ಕಷ್ಟವಾಗಿದೆ.
ಅಲ್ಲದೆ ಮಕ್ಕಳ ದಾಖಲಾತಿ, ಕ್ರೀಡಾಕೂಟ, ಪ್ರತಿಭಾಕಾರಂಜಿ ಹೀಗೆ ಅನೇಕ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಮತ್ತು ದಾಖಲೆಗಳ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಹೀಗಿರುವಾಗ ಶಾಲೆಯ ಶಿಕ್ಷಕರನ್ನು ಒಂದು ತಿಂಗಳ ಕಾಲ ಮತದಾರರ ಪಟ್ಟಿ ತಯಾರಿಕೆ, ಮತ್ತು ಮನೆ ಮನೆಗೆ ಬೇಟಿ ಕರ್ತವ್ಯದಲ್ಲಿ ತೊಡಗಿಕೊಂಡಾಗ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಹೇಗೆ ಸಾಧ್ಯ, ಈ ಎಲ್ಲಾ ಕಾರಣಗಳಿಂದಾಗಿ ಶಿಕ್ಷಕರನ್ನು ಬಿ.ಎಲ.ಒ. ಕರ್ತವ್ಯದಿಂದ ಮುಕ್ತಗೊಳಿಸಬೇಕೆಂದು 2018ರಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ನೀಡಿದ್ದಾರೆ, ಅಲ್ಲದೆ ಸರ್ವೋಚ್ಚ ನ್ಯಾಯಾಲಯವು ಕೂಡ ಸದರಿ ಕರ್ತವ್ಯಕ್ಕೆ ಶಿಕ್ಷಕರನ್ನು ನಿಯೋಜಿಸಬಾರದೆಂದು ಆದೇಶ ನೀಡಿರುತ್ತದೆ.
ಅಲ್ಲದೆ ಅನೇಕ ಬಾರಿ ಕೇಂದ್ರ ಚುನಾವಣಾ ಆಯೋಗವು ಪತ್ರಿಕಾ ಪ್ರಕಟಣೆಗಳಲ್ಲಿ ಶಿಕ್ಷಕರನ್ನು ಬಿ.ಎಲ್.ಒ. ಕರ್ತವ್ಯಕ್ಕೆ ನಿಯೋಜಿಸದಿರಲು ಸೂಚನೆ ನೀಡಿರುತ್ತದೆ.  ಇದಲ್ಲದೆ ಪ್ರಸ್ತುತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಕೂಡ ಮಾಧ್ಯಮಗಳ ಮೂಲಕ ಶಿಕ್ಷಕರನ್ನು ಬಿ.ಎಲ್.ಒ. ಹೊಣೆಯಿಂದ ಮುಕ್ತೊಗೊಳಿಸಬೇಕೆಂದು ಹೇಳಿಕೆ ನೀಡಿರುತ್ತಾರೆ.
ಆದ್ದರಿಂದ ತಾಲೂಕಿನಲ್ಲಿ ಬಿ.ಎಲ್.ಒ. ಕರ್ತವ್ಯಕ್ಕೆ ನಿಯೋಜಿಸಿಕೊಂಡಿರುವ ಸರ್ಕಾರ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸದರಿ ಕರ್ತವ್ಯದಿಂದ ಮುಕ್ತಗೊಳಿಸಿ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಪ್ರ.ಕಾರ್ಯದರ್ಶಿ ವೈ.ಹನುಮನಗೌಡ, ಉಪಾಧ್ಯಕ್ಷ ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ಹನುಮಂತರೆಡ್ಡಿ, ಎನ್.ಎಸ್.ಪಿ. ನೌಕರರ ಸಂಘದ ಉಪಾಧ್ಯಕ್ಷ ರ‍್ರೆಪ್ಪ, ಶಿಕ್ಷಕರಾದ ಪ್ರಮೋದ್ ಕುಮಾರ್, ಹನುಮಂತಪ್ಪ, ನಾಗರತ್ನಮ್ಮ, ರಾಧ, ಶರಣಮ್ಮ ಇನ್ನಿತರರು ಇದ್ದರು.