
ದಾವಣಗೆರೆ.ಮೇ.೧೯; ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಲಂಬಾಣಿ ಜನಾಂಗದ ಶಾಸಕ ರುದ್ರಪ್ಪ ಲಮಾಣಿ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಆಯ್ಕೆ ಮಾಡಬೇಕೆಂದು ದಾವಣಗೆರೆ ಜಿಲ್ಲಾ ಬಂಜಾರ ಸೇವಾ ಸಂಘದ ಕಾರ್ಯದರ್ಶಿ ಕೆ.ಆರ್ ಮಲ್ಲೇಶ್ ನಾಯ್ಕ್ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಿಜೆಪಿ ಸರ್ಕಾರದ ಅವೈಜ್ಞಾನಿಕ ಮೀಸಲಾತಿ ವರ್ಗೀಕರಣದಿಂದ ಅನ್ಯಾಯವಾಗಿರುವ ಲಂಬಾಣಿ, ಭೋವಿ, ಕೊರಚ, ಕೊರಮ ಸೇರಿದಂತೆ ಅನೇಕ ಪರಿಶಿಷ್ಟ ಜಾತಿಗಳೆಲ್ಲ ಒಳ ಮೀಸಲಾತಿ ವಿರುದ್ದ ಸಿಡಿದೆದ್ದ ಪರಿಣಾಮ ಬಿಜೆಪಿಗೆ ಸೋಲುಂಟಾಗಿದೆ. ಬಿಜೆಪಿಯ ವಿರುದ್ಧ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿ ಮತದಾನ ನೀಡಿದ್ದರ ಪ್ರತಿಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತ ಪಡೆದು, ಸರ್ಕಾರವನ್ನು ರಚಿಸಲು ಕಾರಣವಾಗಿದೆ.ರಾಜ್ಯದಾದ್ಯಂತ ಅನೇಕ ಲಂಬಾಣಿ ಮುಖಂಡರಿಗೆ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡದ್ದರೂ ಕೇವಲ ಹಾವೇರಿ ಕ್ಷೇತ್ರದಲ್ಲಿ ಮಾತ್ರ ಗೆದ್ದಿರುವ ಏಕೈಕ ಶಾಸಕರಾದ ರುದ್ರಪ್ಪ ಲಮಾಣಿ ಮೊದಲಿನಿಂದಲೂ ಕಾಂಗ್ರೆಸ್ಸಿಗಾಗಿ ದುಡಿದವರಾಗಿದ್ದು, ಸತತ ೫ ಬಾರಿ ಕಾಂಗ್ರೇಸ್ನಿಂದ ಜಯಗಳಿಸಿ ಸಚಿವರಾಗಿದ್ದಾರೆ. ಲಂಬಾಣಿಗರನ್ನು ಪ್ರತಿನಿಧಿಸಲು ಈ ಬಾರಿ ಕಾಂಗ್ರೆಸ್ನಿಂದ ಅವರೊಬ್ಬರೆ ಶಾಸಕರಿರುವುದರಿಂದ ಅವರನ್ನು ಸಂಪುಟ ದರ್ಜೆಯ ಹಾಗೂ ಈ ಜನಾಂಗಕ್ಕೆ ಅನುಕೂಲವಾಗುವ ರೀತಿ ಉತ್ತಮ ಖಾತೆಯನ್ನು ನೀಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಂಜಾನಾಯ್ಕ, ಎಸ್.ಬಸವರಾಜನಾಯ್ಕ, ಅರುಣಕುಮಾರ್, ರವಿ,ಶೀತಲ್ ನಾಯ್ಕ್,ಸಂತೋಷ್ ನಾಯ್ಕ್ ಉಪಸ್ಥಿತರಿದ್ದರು.