ಶಾಸಕ ಮಾಡಾಳ್ ಪುತ್ರ ಬಿಡ್ಲೂಎಸ್ ಎಸ್ ಬಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್‌ ಲೋಕಾ ಬಲೆಗೆ

ಬೆಂಗಳೂರು,ಮಾ.2- ಲಂಚ ಸ್ವೀಕರಿಸುತ್ತಿದ್ದ ವೇಳೆ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಪ್ರಶಾಂತ್‌ ಲೋಕಾಯುಕ್ತ ಬಲೆಗೆ ರೆಡ್‌ಹ್ಯಾಂಡ್​ ಆಗಿ ಸಿಕ್ಕಿಬಿದಿದ್ದಾರೆ.
ಟೆಂಡರ್ ಕೊಡಿಸುವ ವಿಚಾರದಲ್ಲಿ ಗುತ್ತಿಗೆದಾರನಿಂದ 80 ಲಕ್ಷಕ್ಕೂ ಹೆಚ್ಚು ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಮುಂಗಡವಾಗಿ 40 ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಶಾಸಕರ ಪುತ್ರ ಪ್ರಶಾಂತ್‌ ಬಿಡ್ಲೂಎಸ್ ಎಸ್ ಬಿ ಮುಖ್ಯ ಲೆಕ್ಕಾಧಿಕಾರಿಯಾಗಿದ್ದಾರೆ.
ಕೆಎಸ್ ಡಿಎಲ್ ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚಕ್ಕೆ ಬೇಡಿಯಿಟ್ಟಿದ್ದರು ಎನ್ನಲಾಗುತ್ತಿದೆ. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್​ಗಳಲ್ಲಿ 2 ಸಾವಿರ ರೂ. ಮತ್ತು 500 ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆ ಆಗಿವೆ. ಮಾಡಾಳ್ ಪ್ರಶಾಂತ್ ಕಚೇರಿ ಕಲೆಕ್ಷನ್​ ಸೆಂಟರ್​ ಆಗಿರುವ ಶಂಕೆ ವ್ಯಕ್ತವಾಗಿದೆ.
ಶಾಸಕ ಮತ್ತು ಕೆಎಸ್​ಡಿಎಲ್ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಪ್ರತಿಕ್ರಿಯೆ ನೀಡಿದ್ದು, ಪುತ್ರ ಪ್ರಶಾಂತ್ ಲೋಕಾಯುಕ್ತ ಬಲೆಗೆ ಬಿದ್ದ ವಿಚಾರ ನಾನು ಈಗಷ್ಟೇ ಟಿವಿಯಲ್ಲಿ ನೋಡುತ್ತಿದ್ದೇನೆ. ಏನು ವಿಷಯ ಅಂತಾ ಇನ್ನೂ ಗೊತ್ತಿಲ್ಲ. ಕ್ಷೇತ್ರದಿಂದ ಈಗ ಬೆಂಗಳೂರಿಗೆ ಬರುತ್ತಿದ್ದೇನೆ. ನಾಳೆ ಬೆಂಗಳೂರಿನಲ್ಲಿ ಸಿಗುತ್ತೇನೆ ಎಂದು ಹೇಳಿದರು.
ಹಣದ ಬ್ಯಾಗ್​ಗಳು ಪತ್ತೆ
2008ರಲ್ಲಿ ಕೆಎಎಸ್ ಪಾಸ್‌ ಆಗಿದ್ದ ಶಾಸಕರ ಪುತ್ರ ಮಾಡಾಳ್ ಪ್ರಶಾಂತ್​​ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ. ಮಾಡಾಳ್ ವಿರೂಪಾಕ್ಷಪ್ಪಗೆ ಮೂವರು ಗಂಡು ಮಕ್ಕಳಿದ್ದು, ಮೂವರು ಗಂಡು ಮಕ್ಕಳ ಪೈಕಿ ಪ್ರಶಾಂತ್​ ಎರಡನೇ ಪುತ್ರ. ಈ ಹಿಂದೆ ನಡೆದಿರುವ ಕೆಎಸ್ ಡಿಎಲ್ ನ ಟೆಂಡರನಲ್ಲೂ ಅವ್ಯವಹಾರ ಶಂಕೆ ವ್ಯಕ್ತವಾಗಿದೆ. ಕಚೇರಿಯಲ್ಲಿರುವ ಎಲ್ಲ ಹಣವನ್ನು  ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
40 ಲಕ್ಷದ ಹೊರತಾಗಿ ಬೇರೆ ಬೇರೆ ಹಣದ ಬ್ಯಾಗ್​ಗಳು ಪತ್ತೆಯಾಗಿವೆ. ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿಗೆ ಶಾಸಕ ಮಾಡಳ್ ವಿರೂಪಾಕ್ಷಪ್ಪ ಆಗಾಗ ಬರುತ್ತಿದ್ದರು. ಕ್ರೆಸೆಂಟ್ ರಸ್ತೆಯ ಬಿಲ್ಡಿಂಗ್​ವೊಂದರ ಮೊದಲ ಮಹಡಿಯಲ್ಲಿ ಕಚೇರಿಯಿದ್ದು, ಟೆಂಡರ್ ಪ್ರಕ್ರಿಯೆ ಡೀಲ್ ಸ್ಪಾಟ್ ಆಗಿದೆ. ಕೆಲ ಸಿಬ್ಬಂದಿಗಳೊಂದಿಗೆ ಪ್ರಶಾಂತ್ ಕಚೇರಿ ನಡೆಸುತ್ತಿದ್ದಾರೆ.
ಲೋಕಾಯುಕ್ತ ಐಜಿಪಿ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್​ ಪ್ರತಿಕ್ರಿಯೆ ನೀಡಿದ್ದು, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಟೆಂಡರ್​ನಲ್ಲಿ ಭಾಗಿಯಾಗಿದ್ದ ಗುತ್ತಿಗೆದಾರನಿಂದ 40 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಪ್ರಶಾಂತ್​ ಬಲೆಗೆ ಬಿದ್ದಿದ್ದಾರೆ. ಕೆಎಸ್​ಡಿಎಲ್​ ಟೆಂಡರ್​ ಸಂಬಂಧ ಖಾಸಗಿ ವ್ಯಕ್ತಿ ಇಂದು ಬೆಳಗ್ಗೆ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿ ದಾಳಿ ಮಾಡಲಾಗಿದೆ ಎಂದು ಹೇಳಿದರು.