
ಹಾರೋಹಳ್ಳಿ,ಮಾ.೩-ಗ್ರಾಮದಲ್ಲಿನ ಕಾಮಗಾರಿ ಗುದ್ದಲಿ ಪೂಜೆ ವೇಳೆ ಶಾಸಕರ ಎದುರೇ ಕಾರ್ಯಕರ್ತರು ಕೈ ಕೈ ಮಿಲಾಯಿಸಿ ಕಿತ್ತಾಡಿಕೊಂಡಿದ್ದು ಹಾರೋಹಳ್ಳಿ ತಾಲೂಕಿನ ಕಡಸಿಕೊಪ್ಪ ಗ್ರಾಮದಲ್ಲಿ ನಡೆಯಿತು.
ಶಾಸಕಿ ಅನಿತಾ ಕುಮಾರಸ್ವಾಮಿ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಸೊಮವಾರ ಕಡಸಿಕೊಪ್ಪ ಗ್ರಾಮಕ್ಕೆ ಬಂದಾಗ ಕಾಮಗಾರಿ ಮಾಡುವ ವಿಚಾರವಾಗಿ ಜೆಡಿಎಸ್ ನ ಹಳೆ ಮತ್ತು ಹೊಸ ಕಾರ್ಯಕರ್ತ ನಡುವೆ ಈ ಗಲಾಟೆ ಆಗಿದೆ.
ಕಾಂಕ್ರೀಟ್ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ನೀವು ಹೊಸದಾಗಿ ಪಕ್ಷಕ್ಕೆ ಬಂದವರಿಗೆ ಕೊಟ್ಟರೆ ೧೫ ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುವ ನಾವುಗಳು ಏನು ಮಾಡಬೇಕು, ಚುನಾವಣೆ ಮಾಡಲು ನಾವು ಬೇಕು, ಕಾಮಗಾರಿ ಮಾಡಲು ಬೇರೆಯವರ ಎಂದು ಶಾಸಕರನ್ನು ಆಗ್ರಹಿಸಿದರು.
ಈ ವೇಳೆ ಪಕ್ಷದ ಮುಖಂಡರುಗಳ ಎರಡು ಕಡೆ ಗುಂಪಿನವರನ್ನು ಸಮಧಾನ ಪಡಿಸಲು ಪ್ರಯತ್ನಿಸಿದರು. ಆದರೆ ಎರಡು ಕಡೆಯವರು ಸುಮ್ಮನಾಗದೆ ಮಾತಿನ ಚಕಮಕಿ ಜೋರಾಗಿ ತಳ್ಳಾಡಲು ಮುಂದಾದರು.
ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಬೇಸರದಿಂದ ಕಾರನ್ನು ಹತ್ತಿ ಅಲ್ಲಿಂದ ಜಾಗ ಖಾಲಿ ಮಾಡಿದರು.