ಶಾಲಾ ಪಠ್ಯದಿಂದ ಡಾರ್ವಿನ್ ಸಿದ್ಧಾಂತ ತೆಗೆದುಹಾಕಿರುವುದಕ್ಕೆ ಎಐಡಿಎಸ್‍ಓ ಖಂಡನೆ

ಕಲಬುರಗಿ,ಏ.27-ಶಾಲಾ ಪಠ್ಯ ಪುಸ್ತಕದಿಂದ ಡಾರ್ವಿನ್ ಸಿದ್ಧಾಂತ ಹಾಗೂ ಇನ್ನಿತರ ವಿಷಯಗಳನ್ನು ತೆಗೆದುಹಾಕಿರುವ ಬಿಜೆಪಿ ಸರ್ಕಾರದ ನಡೆಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಉಗ್ರವಾಗಿ ಖಂಡಿಸಿದ್ದಾರೆ.
ಪಾಠಗಳ ಹೊರೆಯನ್ನು ಕಡಿಮೆ ಮಾಡುತ್ತೇವೆ ಎಂಬ ನೆಪವೊಡ್ಡಿ, ಎನ್‍ಸಿಇಆರ್‍ಟಿ ತಂದಿರುವ ಈ ಬದಲಾವಣೆಗಳು ಹಲವು ರೀತಿಯಲ್ಲಿ ಅತ್ಯಂತ ಅಪಾಯಕಾರಿಯಾಗಿದೆ. 10ನೇ ತರಗತಿ ಪಠ್ಯದಿಂದ ವಿಕಾಸ ಸಿದ್ಧಾಂತವನ್ನು ತೆಗೆದು ಹಾಕಲಾಗಿದೆ. ಅಂದರೆ, ಪಿಯುಸಿಗೆ ಬಂದಾಗ ಅದೂ ಆ ವಿದ್ಯಾರ್ಥಿಯೂ ವಿಜ್ಞಾನ ವಿಭಾಗ ಆಯ್ಕೆ ಮಾಡಿದರೆ ಮಾತ್ರ ವಿಕಾಸ ಸಿದ್ಧಾಂತವನ್ನು ಓದಬಹುದು. ಡಾರ್ವಿನ್‍ರ ಜೀವ ವಿಕಾಸ ಸಿದ್ಧಾಂತವು ನಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಮಹತ್ವಪೂರ್ಣ ಜ್ಞಾನವನ್ನು ನೀಡುತ್ತದೆ. ಜೀವ ವಿಕಾಸ ಕುರಿತ ಧಾರ್ಮಿಕ ನಂಬಿಕೆಗಳ ಸುತ್ತ ಹುಟ್ಟಿಕೊಂಡಿದ್ದ ಹಲವು ಗೊಂದಲಗಳಿಗೆ ಈ ಸಿದ್ಧಾಂತ ಉತ್ತರ ನೀಡಿದೆ. ಬಹುಮುಖ್ಯವಾಗಿ, ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಇದು ಮಹತ್ವಪೂರ್ಣ ಸಿದ್ಧಾಂತ. ಡಾರ್ವಿನ್‍ರ ಸತತ ಪರಿಶ್ರಮ ಮತ್ತು ಒಳನೋಟದಿಂದ ನೈಸರ್ಗಿಕ ಆಯ್ಕೆಯ ಸಿದ್ಧಾಂತವು ರೂಪುಗೊಂಡಿತು. ಈ ಪ್ರಯತ್ನಗಳು ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಕ್ರಿಯೆ ಮತ್ತು ವಿಮರ್ಶಾತ್ಮಕ ಚಿಂತನೆಯ ಮಹತ್ವದ ಬಗ್ಗೆ ಶಿಕ್ಷಣ ನೀಡುತ್ತವೆ. ಪ್ರಪಂಚದ ಸಮಗ್ರ ಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರತಿಯೊಬ್ಬ ವಿದ್ಯಾರ್ಥಿಯು ವಿಕಾಸದ ಮೂಲಭೂತ ತಿಳುವಳಿಕೆಯನ್ನು ಹೊಂದಿರಬೇಕು. ಸ್ವಾತಂತ್ರ್ಯ ಸಂಗ್ರಾಮ, ಸಾಂಸ್ಕøತಿಕ ಪರಂಪರೆ ಮತ್ತು ವೈವಿದ್ಯತೆ ಸೇರಿದಂತೆ ಮುಂತಾದವುಗಳ ಕುರಿತು ಜ್ಞಾನವನ್ನು ಒದಗಿಸುತ್ತಿದ್ದ ಪಾಠಗಳನ್ನು ಕೈಬಿಡಲಾಗಿದೆ. ‘ಪ್ರಜಾತಂತ್ರ ಮತ್ತು ವೈವಿಧ್ಯತೆ’, ‘ಜನ ಚಳವಳಿ ಮತ್ತು ಹೋರಾಟಗಳು’, ‘ಪ್ರಜಾತಂತ್ರದ ಸವಾಲುಗಳು’, ‘ಮೊಘಲ್ ಆಳ್ವಿಕರು ಮತ್ತು ಅವರ ಆಳ್ವಿಕೆ’, ‘ವಸಾಹತುಶಾಹಿ ನಗರಗಳು’ ಮತ್ತು ‘ಭಾರತದ ವಿಭಜನೆ’ ಯಂತಹ ಅನೇಕ ಮಹತ್ವಪೂರ್ಣ ಅಧ್ಯಾಯಗಳನ್ನು ಕೈಬಿಡಲಾಗಿದೆ. ಇರಾಕ್ ಗೋರಕ್ಪುರಿಯವರ ಗಜಲ್ ಗಳು, ಸೂರ್ಯಕಾಂತ ತ್ರಿಪಾಟಿ ಅವರ ಕವಿತೆಗಳು, ಚಾರ್ಲಿ ಚಾಪ್ಲಿನ್ ಕುರಿತ ಪಾಠ ಮುಂತಾದ ಪ್ರಜಾತಾಂತ್ರಿಕ ಹಾಗೂ ಮೌಲ್ಯಯುತ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಆದ್ದರಿಂದ ಎನ್‍ಸಿಇಆರ್‍ಟಿ ಅನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.