ಶಾಲಾ ಅಂಗಳದಲ್ಲೇ ವಿಜ್ಞಾನ ಪ್ರಯೋಗ ಪ್ರದರ್ಶನ

ಕೋಲಾರ,ಜು.೨೮- ಕುಪ್ಪಂನ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಟಾನದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಯೋಗಗಳ ಮೂಲಕ ವಿಜ್ಞಾನದ ಅರಿವನ್ನು ಪ್ರಯೋಗಗಳ ಮೂಲಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಒದಗಿಸುವ ಪ್ರಯತ್ನ ಶ್ಲಾಘನೀಯವಾಗಿದ್ದು, ವಿಜ್ಞಾನದ ಚೇತೋಹಾರಿ ಕಲಿಕೆಗೆ ನೆರವಾಗಿದೆ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ ಶ್ಲಾಘಿಸಿದರು.
ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅಗಸ್ತ್ಯ ಫೌಂಡೇಷನ್ ಹಾಗೂ ಎಲ್‌ಎಸ್‌ಐ(ಎಂ.ಎಸ್‌ಎಲ್) ಸಹಯೋಗದೊಂದಿಗೆ ಮೊಬೈಲ್ ವಿಜ್ಞಾನ ಪ್ರಯೋಗಾಲಯದ ಮೂಲಕ ಶಾಲೆಗೆ ಆಗಮಿಸಿ ಮಕ್ಕಳ ಚೇತೋಹಾರಿ ಕಲಿಕೆಗೆ ನೆರವಾಗಿದ್ದನ್ನು ಸ್ವಾಗತಿಸಿ ಅವರು ಮಾತನಾಡಿದರು.
ಈಗಾಗಲೇ ಕೋಲಾರ ತಾಲ್ಲೂಕಿನ ೮೦ಕ್ಕೂ ಹೆಚ್ಚು ಶಾಲೆಗಳಲ್ಲಿ ಉಚಿತವಾಗಿ ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿಸಿರುವ ಅಗಸ್ತ್ಯ ಫೌಂಡೇಷನ್ ಕಾರ್ಯ ಮೆಚ್ಚುವಂತದ್ದು ಎಂದ ಅವರು, ಮಕ್ಕಳಿಗೆ ತಾತ್ವಕ ಬೋಧನೆಗಿಂತ ಚಟುವಟಿಕೆಯಾಧಾರಿತ ಪ್ರಯೋಗಗಳ ಮೂಲಕ ಕಲಿಕೆ ಹೆಚ್ಚು ಕಾಲ ಮನದಲ್ಲಿ ಉಳಿಯುವಂತೆ ಮಾಡುತ್ತದೆ ಎಂದರು.
ಅಗಸ್ತ್ಯ ಫೌಂಡೇಷನ್‌ನ ವ್ಯವಸ್ಥಾಪಕ ಕೆ.ಎಸ್.ಹರೀಶ್ ಕುಮಾರ್, ಅಗಸ್ತ್ಯ ಫೌಂಡೇಷನ್‌ನ ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಲ್.ಸುರೇಶ್, ಎಂ.ನಾಗಪ್ಪ, ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ, ಸುಗುಣಾ, ಲೀಲಾ, ಫರೀದಾ, ಶ್ರೀನಿವಾಸಲು, ರಮಾದೇವಿ, ಡಿ.ಚಂದ್ರಶೇಕರ್ ಇದ್ದರು.