ಶರಣ ತತ್ವಕ್ಕೆ ಬಿದರಿ ಕೊಡುಗೆ ಅನನ್ಯ

ಕಲಬುರಗಿ,ಏ.15: ಸಮಾಜಮುಖಿ ನ್ಯಾಯವಾದಿ ಶಿವಕುಮಾರ ಬಿದರಿ ಅವರು ಬಾಲ್ಯದಿಂದಲೇ ಶರಣ ತತ್ವವನ್ನು ಮೈಗೂಡಿಸಿಕೊಂಡು ಬೆಳೆದವರು. ಶರಣ ತತ್ವದ ಪ್ರಚಾರ, ಪ್ರಸಾರಕ್ಕಾಗಿ ವ್ಯಾಪಕವಾಗಿ ಶ್ರಮಿಸಿದ, ಲಿಂಗಾಯತ ಸ್ವತಂತ್ರ್ಯ ಧರ್ಮದ ಮಾನ್ಯತೆಗಾಗಿ ಹೋರಾಟ ಮಾಡುತ್ತಿದ್ದಾರೆ. ಅವರು ಶರಣ ತತ್ವಕ್ಕಾಗಿ ತಮ್ಮದೇ ಆದ ಅನನ್ಯವಾದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಆಚರಿಸಲಾಗುವ 890ನೇ ಬಸವ ಜಯಂತಿ ಉತ್ಸವ ಸಮಿತಿಗೆ ಕಾರ್ಯದರ್ಶಿಯಾಗಿ ನೇಮಕರಾದ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ನಗರದ ಜಿಲ್ಲಾ ಕೋರ್ಟ್ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಮೂಲತಃ ಜೇವರ್ಗಿ ಪಟ್ಟಣದವರಾದ ಬಿದರಿ ಅವರು, ಶ್ರೀ ಷಣ್ಮುಖ ಶಿವಯೋಗಿಗಳ ಮಠದ ಆಧ್ಯಾತ್ಮಿಕ ಪರಿಸರದಲ್ಲಿ ಬೆಳೆದವರಾಗಿದ್ದರಿಂದ ಅವರಲ್ಲಿ ಶರಣ ತತ್ವದ ಗುಣಗಳು ಬಾಲ್ಯದಿಂದಲೇ ಮೈಗೂಡಿವೆ. ಜೇವರ್ಗಿಯಲ್ಲಿ ವಾರ್ಡವಾರು ಬಸವ ಜಯಂತಿಯ ಆಚರಣೆ, ವಿಜಯಪುರ ಕ್ರಾಸ್‍ದಲ್ಲಿ ಬಸವೇಶ್ವರ ವೃತ್ತದ ನಾಮಕರಣ ಮತ್ತು ಅದರ ಸ್ಥಾಪನೆಯಲ್ಲಿ ಇವರ ಅಪಾರವಾದ ಶ್ರಮವಿದೆ. ಅ.ಭಾ.ಶ.ಸಾ.ಪ. ತಾಲೂಕಾ ಕಾರ್ಯದರ್ಶಿ 12 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುವ ಮೂಲಕ ತಾಲೂಕಿನೆಲ್ಲೆಡೆ ಶರಣ ತತ್ವವನ್ನು ಪಸರಿಸುವ ಕಾರ್ಯ ಮಾಡಿದ್ದಾರೆ. ತಾಲೂಕಾ ಕಸಾಪ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಿದ್ದೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭಾದ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಜವಾಗಿಯೂ ಶರಣ ತತ್ವದ ಕಾಳಜಿಯುಳ್ಳ ವ್ಯಕ್ತಿಗೆ ಸೂಕ್ತ ಜವಾಬ್ದಾರಿ ದೊರೆತಿದ್ದು ಸಂತಸವಾಗಿದೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಶಿವಕುಮಾರ ಬಿದರಿ, ಬಾಲ್ಯದಿಂದಲೇ ನನಗೆ ಶರಣ ತತ್ವದ ಬಗ್ಗೆ ಅಪಾರವಾದ ಭಕ್ತಿ, ಶೃದ್ಧೆಯಿದೆ. ಬಸವಾದಿ ಶರಣರ ತತ್ವಗಳನ್ನು ಅಳವಡಿಕೆಯಿಂದ ಬದುಕು ಸುಂದರವಾಗುತ್ತದೆ ಎಂಬುದು ನನ್ನ ಅಚಲವಾದ ನಂಬಿಕೆಯಾಗಿದ್ದು, ಇದನ್ನು ಎಲ್ಲೆಡೆ ಪಸರಿಸಬೇಕು ಎಂಬ ಆಶಯದೊಂದಿಗೆ ಕಳೆದ ಅನೇಕ ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಸೇವೆಯನ್ನು ಗುರ್ತಿಸಿ ಜಯಂತಿ ಉತ್ಸವ ಸಮಿತಿಗೆ ಪ್ರಭುಲಿಂಗ ಮಹಾಗಾಂವಕರ್, ರವೀಂದ್ರ ಶಾಬಾದಿ, ಆರ್.ಜಿ.ಶೆಟಗಾರ ಅವರನ್ನೊಳಗೊಂಡ ಜೆಎಲ್‍ಎಂ ಕಾರ್ಯದರ್ಶಿಯನ್ನಾಗಿ ಮಾಡಿದ್ದು, ಅರ್ಥಪೂರ್ಣ ಬಸವ ಜಯಂತಿಯನ್ನು ಆಚರಿಸಲು ಹಗಲು-ರಾತ್ರಿಯೆನ್ನದೇ ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಲಿಂಗರಾಜ ಸಿರಗಾಪೂರ್, ನ್ಯಾಯವಾದಿಗಳಾದ ಹಣಮಂತರಾಯ ಎಸ್.ಅಟ್ಟೂರ್, ಪ್ರಮೋದ ಕುಲಕರ್ಣಿ, ರವಿಕಾಂತ ಮಣಿ, ಐ.ಜಿ.ರೆಡ್ಡಿ, ಹೀರಾಲಾಲ್ ಚವ್ಹಾಣ, ಭೀಮಾಶಂಕರ ಪೂಜಾರಿ, ಬಸವರಾಜ ಶಿರವಾಳ್, ಬೀರಣ್ಣ ಮಿಚಖೇಡ್, ಶ್ರೀಕಾಂತ ಸಿಂಗ್, ಸಿದ್ದಣಗೌಡ್ ಪಾಟೀಲ್, ಶಾಂತಪ್ಪ ಚಿಕ್ಕಳ್ಳಿ, ತೇನಸಿಂಗ್ ನೋಟರಿ, ಅಪ್ಪಾಸಾಬ ಕೋಳ್ಕೂರ್, ಬಸವರಾಜ ಕೋಬಾಳ್, ಸಿದ್ದಲಿಂಗ ಮಡಿವಾಳ್, ಮಲ್ಲಿಕಾರ್ಜುನ ಘೂಳಿ, ವಿ.ಆರ್.ಮಂಗಾಣೆ, ಲಕ್ಷ್ಮೀಕಾಂತ ವಾಗೆ, ಬಿ.ಆರ್.ಬಿರಾದಾರ್, ನಿರ್ಮಲಾ ಬಿರಾದಾರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.