ಕಲಬುರಗಿ,ಸೆ.22: ಪಾಲಕರು ಮತ್ತು ಮಕ್ಕಳು ಪ್ರತಿನಿತ್ಯ ಮನೆಯಲ್ಲಿ ಪರಸ್ಪರ ಭೇಟಿಯಾಗುತ್ತಾರೆ ಆದರೆ ಇಂದು ಶರಣಬಸವ ವಿಶ್ವವಿದ್ಯಾಲಯದಲ್ಲಿ ಭೇಟಿಯಾಗಿದ್ದು ಬಹಳ ವಿಶೇಷ. ಇಂದಿನ ದಿನ ತಂದೆ ತಾಯಿಗಳಿಗೆ ವಿದ್ಯಾರ್ಥಿ ಮಕ್ಕಳು ವಿಶೇಷವಾಗಿ ಪಾದಪೂಜೆಗೈದರು. ಭಾವುಕರಾಗಿ ಅಪ್ಪಿಕೊಂಡರು. ವಿದ್ಯಾರ್ಥಿ ಮಕ್ಕಳು ತಮ್ಮ ಪಾಲಕರಿಗೆ, ಹಿಂದೆ ತಿಳಿಯದೆ ನಡೆದ ತಪ್ಪಿಗೆ ಕ್ಷಮಿಸಿ ಎಂದು ಭಾವುಕರಾಗಿ ನುಡಿದರು. ಇನ್ನೊಮ್ಮೆ ತಮಗೆ ಯಾವುದೇ ರೀತಿಯ ನೋವು ಕೊಡುವುದಿಲ್ಲ ಮತ್ತು ಸರಿಯಾಗಿ ಅಭ್ಯಾಸ ಮಾಡುತ್ತೇನೆಂದು ಕಾಲಿಗೆರಗಿದರು. ಆಗ ಹೆತ್ತ ಕರುಳುಗಳ ಕಣ್ಣಂಚಿನಲ್ಲಿ ನೀರು ತುಂಬಿತ್ತು. ಅವರು ಮಕ್ಕಳಿಗೆ ಅಪ್ಪಿಕೊಂಡು ಆಶೀರ್ವದಿಸಿದರು.
ಪಾಲಕರು, ಶರಣಬಸವ ವಿಶ್ವವಿದ್ಯಾಲಯದಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆದಿದ್ದು ನಮ್ಮ ಅದೃಷ್ಠ, ಅಧ್ಯಯನಕ್ಕಾಗಿ ಮಕ್ಕಳು ಕಾಲೇಜಿಗೆ ಬಂದರೂ ಜೊತೆಯಲ್ಲಿ ಅವರು ಸಂಸ್ಕøತಿಯನ್ನು ಕಲಿಯುತ್ತಾರೆಂದು ಸಂತೋಷ ವ್ಯಕ್ತಪಡಿಸಿದರು.
ಇದೆಲ್ಲಾ ನಡೆದಿದ್ದು ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶುಕ್ರವಾರದಂದು ಮೊದಲ ವರ್ಷ ಪ್ರವೇಶ ಪಡೆದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ, ಅವರವರ ತಂದೆ ತಾಯಿಗಳಿಗೆ ಏರ್ಪಡಿಸಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ.
ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಅವರ ತಂದೆತಾಯಂದಿರು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೋಟಿವೇಶನಲ್ ಸ್ಪೀಕರ್ ಸತೀಶ್ ಆರ್ ಅವರು ಮಕ್ಕಳಿಗೆ ಪಾದಪೂಜೆಯ ವಿಧಿವಿಧಾನಗಳನ್ನು ಹೇಳಿಕೊಟ್ಟರು ಹಾಗೂ ತಾಯಿಗೆ ಮಮ್ಮಿ ಎನ್ನದೆ ಅಮ್ಮಾ ಎಂದು ಕರೆಯಬೇಕೆಂದು ಮನವರಿಕೆ ಮಾಡಿಕೊಟ್ಟರು. ನಂತರ ಅಧ್ಯಾಪಕ ವೃಂದಕ್ಕೆ ವಿದ್ಯಾರ್ಥಿಗಳು ಪಾದಪೂಜೆಗೈದರು.
ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ಶರಣಬಸವ ವಿಶ್ವವಿದ್ಯಾಲಯ ಹಾಗೂ ಅಧ್ಯಾಪಕ ವೃಂದಕ್ಕೆ ಈ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ವಿವಿಯ ಡೀನ್ ಡಾ.ಲಕ್ಷೀ ಪಾಟೀಲ್ ಮಾಕಾ, ವಿವಿಯ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಡೀನ್ ಡಾ. ಶಿವಕುಮಾರ ಜವಳಗಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.