
ಕಲಬುರಗಿ.ಮಾ.29:ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ 2.5 ಕೋಟಿ ರೂ ಅನುದಾನದಲ್ಲಿ ಶರಣಬಸವೇಶ್ವರ ಯಾತ್ರಿಕ್ ನಿವಾಸದ ನಿರ್ಮಾಣಕ್ಕಾಗಿ ಅಡಿಗಲ್ಲು ಸಮಾರಂಭ ಮತ್ತು ಭೂಮಿ ಪೂಜೆ ಕಾರ್ಯಕ್ರಮವು ಜರುಗಿತು.
ವಿದ್ಯಾ ಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಹಾಗೂ ಮಾತೋಶ್ರೀ ದಾಕ್ಷಾಯಿಣಿ ಎಸ್ ಅಪ್ಪ ಹಾಗೂ 9 ನೇ ಪೀಠಾಧಿಪತಿಗಳಾದ ಚಿ ದೊಡ್ಡಪ್ಪ ಅಪ್ಪ ಅವರ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮವು ಜರುಗಿತು.
ಶ್ರೀ ದತ್ತಾತ್ರೇಯ ಸಿ ಪಾಟೀಲ್ ರೇವೂರ್ ಶಾಸಕರು ಕಲಬುರ್ಗಿ ದಕ್ಷಿಣ ವಿಭಾಗ, ಅಧ್ಯಕ್ಷರು ಕೆ.ಕೆ.ಆರ್.ಡಿ.ಬಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ” ಕಾಯಕ ಮತ್ತು ದಾಸೋಹದ ಮುಖಾಂತರ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಈ ಭಾಗದ ಅಭಿವೃದ್ಧಿಗಾಗಿ ಶಿಕ್ಷಣ ಮತ್ತು ಅನ್ನ ದಾಸೋಹದ ಮುಖಾಂತರ ಪರಿಶ್ರಮಪಟ್ಟಿದ್ದು ಅವಿಸ್ಮರಣೀಯವಾಗಿದೆ. ಗುಣಮಟ್ಟದ ಶಿಕ್ಷಣದಿಂದ ಸಾವಿರಾರು ವಿದ್ಯಾರ್ಥಿಗಳ ಜೀವನ ಆನಂದವಾಗಿದೆ. ಸಂಕಷ್ಟದ ಸಮಯದಲ್ಲಿ ಮಾತೋಶ್ರೀ ದಾಕ್ಷಾಯಿಣಿ ಎಸ್ ಅಪ್ಪ ಅವರು ಅನ್ನದಾಸೋಹದ ಮುಖಾಂತರ ನಿರ್ಗತಿಕರ ಸೇವೆ ಮಾಡಿ ಶರಣರ ಮಹಿಮೆ ಪರಿಚಯ ಮಾಡಿಕೊಟ್ಟಿದ್ದಾರೆ” ಎಂದು ಅವರು ತಮ್ಮ ಭಾಷಣದಲ್ಲಿ ನುಡಿದರು.
ಮಾತೋಶ್ರೀ ದಾಕ್ಷಾಯಿಣಿ ಎಸ್ ಅಪ್ಪ ಅವರು ಮಾತನಾಡುತ್ತಾ “ದತ್ತಾತ್ರೇಯ ಸಿ ಪಾಟೀಲ್ ಅವರು ಶರಣರ ಮನೆತನದವರು, ಅವರ ಸೇವೆಯಿಂದ ಜನಸಾಮಾನ್ಯರಿಗೆ ಅತ್ಯಂತ ಲಾಭವಾಗುತ್ತಿದೆ. ಇನ್ನೂ ಹೆಚ್ಚಿನ ಸೇವೆ ಗೈದು ನಮ್ಮ ಕಲಬುರಗಿಯ ಹೆಸರು ಪ್ರಪಂಚದಲ್ಲೆಡೆ ಪಸರಿಸಲಿ ಎಂದು ಶುಭ ಆಶೀರ್ವಾದ ಮಾಡಿದರು.
ಎಸ್.ಬಿ.ಆರ್.ನ ಅಲುಮಿನಿ ಅಧ್ಯಕ್ಷರಾದ ಡಾ ಭರತ ಕೋಣಿನ್ ಮಾತನಾಡುತ್ತಾ “ಪೂಜ್ಯ ಅಪ್ಪಾಜಿ ಅವರು ಶಿಕ್ಷಣಕ್ಕಾಗಿ ಬಹಳಷ್ಟು ಶ್ರಮಪಟ್ಟಿದ್ದಾರೆ. ಈ ಶರಣಬಸವೇಶ್ವರ ಯಾತ್ರಿಕ್ ನಿವಾಸದ ಸುಸಜ್ಜಿತ ನಿರ್ಮಾಣಕ್ಕಾಗಿ ಎಸ್ ಬಿ ಆರ್ ನ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಾವು ಕೂಡಾ 2 ಕೋಟಿ ಧನ ಸಹಾಯವನ್ನು ಮಾಡುತ್ತೇವೆ” ಎಂದು ಅವರು ಹೇಳಿದರು
ಡಾ. ನಿರಂಜನ್ ನಿಷ್ಠಿ ಉಪಕುಲಪತಿಗಳು ಶರಣಬಸವ ವಿಶ್ವವಿದ್ಯಾಲಯ ಕಲಬುರಗಿ, ಶ್ರೀ ಎನ್ ಎಸ್ ದೇವರಕಲ್ ಪ್ರಾಚಾರ್ಯರು ಎಸ್ ಬಿ ಆರ್ ವಸತಿ ಪಬ್ಲಿಕ್ ಶಾಲೆ ಕಲಬುರಗಿ, ಶ್ರೀ ಬಸವರಾಜ್ ದೇಶಮುಖ ಕಾರ್ಯದರ್ಶಿಗಳು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ವಾಸ್ತುಶಿಲ್ಪಿ ಶ್ರೀ ಬಸವರಾಜ್ ಖಂಡೇರಾವ್ ಹಾಗೂ ಗುರು ವೃಂದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಚಂದ್ರಕಾಂತ ಪಾಟೀಲ್ ಹಿಂದಿ ವಿಭಾಗದ ಮುಖ್ಯಸ್ಥರು ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಕಲಬುರಗಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.