ಶಕ್ತಿ ಯೋಜನೆ ಖಂಡಿಸಿ ವಾಹನ ಚಾಲಕರಿಂದ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.13: ಕರ್ನಾಟಕ ಚಾಲಕರ ಒಕ್ಕೂಟ ವತಿಯಿಂದ ರಾಜ್ಯ ಸರಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ಪ್ರತಿಭಟಿಸಿ ಘೋಷಣೆಗಳನ್ನು ಕೂಗುತ್ತ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಜಿ. ನಾರಾಯಣಸ್ವಾಮಿ ಮಾತನಾಡಿ, ಕರ್ನಾಟಕ ಸರಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಕರ್ನಾಟಕ ರಾಜ್ಯದ ಎಲ್ಲ ಜನ ಸಾಮಾನ್ಯರಿಗೂ ಬಹುಪಯುಕ್ತವಾಗಿದೆ ಆದರೆ ಕರ್ನಾಟಕ ಖಾಸಗಿ ವಾಹನ ಚಾಲಕರಿಗೆ ಅಂದರೆ ಅಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ವಾಹನ ಚಾಲಕರಿಗೆ ಮತ್ತು ವಾಹನ ಓಡಿಸಿ ದುಡಿದು ತಿನ್ನುವವರ ಹೊಟ್ಟೆ ಮೆಲೆ ಬರೆ ಎಳೆದಂತಾಗಿದೆ. ಒಂದು ತಿಂಗಳಿನಿಂದ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ನಾವೆಲ್ಲ ವಾಹನಗಳನ್ನು ಕಂತುಗಳ ಆಧಾರದ ಮೇರೆಗೆ ಖರೀದಿ ಮಾಡಿಕೊಂಡಿದ್ದು ಸದರಿ ವಾಹನದ ಸಾಲದ ಕಂತುಗಳನ್ನು ಭರಿಸಲು ಕಷ್ಟಕರವಾಗಿದೆ. ಇದರ ಹೆಚ್ಚುವರಿಯಾಗಿ ರೋಡ ಟ್ಯಾಕ್ಸ ವಿಮಾ ಕಂತು ಮತ್ತು ದುಬಾರಿಯಾದ ನೊಂದಣಿ ಶುಲ್ಕ ಇವುಗಳ ಜೊತೆಗೆ ನಮ್ಮ ಎಜಂಟ ಸದಸ್ಯರ ಶಿಕ್ಷಣ, ಆರೋಗ್ಯ ಮನೆ ಬಾಡಿಗೆ ಹಾಗೂ ಇನ್ನಿತರ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಅಶೋಕ ಖಿಲಾರಿ ಮಾತನಾಡಿ ಹಗಲಿರುಳು ಅನ್ನದ ದುಡಿಯುವ ನಮ್ಮ ಶ್ರಮಿಕ ವರ್ಗವಾಗಿದೆ. ನಮಗಾಗಿ ಯಾವುದಾದರೂ ಆರ್ಥಿಕ ಯೋಜನೆಯನ್ನು ಬಜೆಟಿನಲ್ಲಿ ಘೋಷಿಸಬಹುದು ಅಂತಾ ನಿರೀಕ್ಷೆಯಲ್ಲಿದ್ದ ನಮಗೆ ಅತೀ ನಿರಾಶೆಯಾಗಿದೆ. ಸದ್ಯ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಿದೆ. ಆದ್ದರಿಂದ ಸರಕಾರ ಕೂಡಲೇ ಶಕ್ತಿ ಯೋಜನೆಯನ್ನು ಕೈ ಬಿಡಬೇಕು. ಇಲ್ಲವಾದರೆ ನಮಗೆ ಬೇರೆ ಉದ್ಯೋಗವನ್ನು ಸೃಷ್ಟಿಸಿಕೊಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಯೋಗೇಶಗೌಡ, ಉಪಾಧ್ಯಕ್ಷರು ಗುರುಮೂರ್ತಿ, ಎಂ.ಡಿ. ಮಸ್ತಾನ, ಜಿಲ್ಲಾ ಉಪಾಧ್ಯಕ್ಷ ಶರಣ ಗಗನಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವನಗೌಡ ಪಾಟೀಲ, ಪರಶುರಾಮ ಹೊನಕಟ್ಟಿ, ಶ್ರೀಕಾಂತ ಕೋಳಿ, ಯಾಸೀನ ಮುಕಾಶಿ, ರಾಜು ಕೋಳಿ, ಬಂದಗಿಸಾಬ ಕೊಳಿ, ಆನಂದ ಯರದಟ್ಟಿ, ಬಸುಗೌಡ ಚಟ್ನಳ್ಳಿ, ಮಂಜು ತಾಳಿಕೋಟಿ ಜಿಲ್ಲಾ ಹಾಗೂ ತಾಲೂಕಿನ ಪದಾಧಿಕಾರಿಗಳು ಹಾಗೂ ಚಾಲಕರು ಉಪಸ್ಥಿತರಿದ್ದರು.