ರಾಯಚೂರು,ಜು.೧೦-
ಸುಮಾರು ೫೦ ವರ್ಷಗಳಿಂದ ನಿರಂತರವಾಗಿ ಮುನ್ನೂರು ಕಾಪು ಸಮಾಜದೊಂದಿಗೆ ನನ್ನ ಒಡನಾಟವಿದೆ, ಮುನ್ನೂರು ಕಾಪು ಸಮಾಜ ವ್ಯವಹಾರ ವಹಿವಾಟು ಮೂಲಕ ಪ್ರತಿಯೊಬ್ಬರು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್ ಬೋಸರಾಜು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರಿನ ಮುನ್ನೂರು ಕಾಪು ಸಮಾಜ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಹಾಗೂ ನೆನಪಿನಕಾಣಿಕೆಯನ್ನು ಸ್ವೀಕರಿಸಿ ಮಾತನಾಡಿದರು.
ನಂತರ ಮುನ್ನೂರು ಕಾಪು ಸಮಾಜದ ಮುಖಂಡರಾದ ಎ. ಪಾಪರೆಡ್ಡಿ ಮಾತನಾಡಿ, ನಾವಿಬ್ಬರೂ ಸುಮಾರು ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ಪಕ್ಷ ಬೇರೆ ಬೇರೆಯಾಗಿದ್ದರೂ ಕೂಡ ನಮ್ಮ ಸ್ನೇಹಕ್ಕೆ ಯಾವುದೇ ಅಡ್ಡಿ ಆತಂಕ ಬಂದಿಲ್ಲ ಎಂದು ಬಾಲ್ಯದ ಜೀವನದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರಿಗೆ ಮುನ್ನೂರು ಕಾಪು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಮುನ್ನೂರು ಕಾಪು ಸಮಾಜದ ಮುಖಂಡರು, ರಾಯಚೂರು ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಬಸವರಾಜ ರೆಡ್ಡಿ, ಬೆಲ್ಲಂ ನರಸಿ ರೆಡ್ಡಿ, ಗೋವಿಂದ ರೆಡ್ಡಿ, ಕೇಶವರಡ್ಡಿ, ಚಂದ್ರಶೇಖರ್ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.