ಕಲಬುರಗಿ,ಅ.28: ದಲಿತ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಭೀಕರ ಹಲ್ಲೆ ಮಾಡಿದ ಘಟನೆಯಿಂದಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾದ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಹರಕಂಚಿ ಗ್ರಾಮದಲ್ಲಿ ವರದಿಯಾಗಿದೆ. ಇನ್ನೊಂದು ಕಡೆಗೆ ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಪೋಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹರಕಂಚಿ ಗ್ರಾಮದ ಜಗದೇವಪ್ಪ ಕ್ವಾಟನೂರ್ (45) ಎಂಬಾತನೇ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಸಂತ್ರಸ್ತ. ಚಿಂತಾಜನಕ ಪರಿಸ್ಥಿತಿಯಲ್ಲಿರುವ ಆತನಿಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಹರಕಂಚಿ ಗ್ರಾಮದ ರೌಡಿಶೀಟರ್ಗಳಾದ ಶಂಕರ್ ನಾಯ್ಕೋಡಿ, ದೇವರಾಜ್ ನಾಯ್ಕೋಡಿ, ಸುನೀಲ್ ನಾಯ್ಕೋಡಿ, ವಿಶಾಲ್ ನಾಯ್ಕೋಡಿ, ಮಾಣಿಕ್ ನಾಯ್ಕೋಡಿ, ಅನಿಲ್ ನಾಯ್ಕೋಡಿ ಹಗೂ ಸಿದ್ರಾಮ್ ನಾಯ್ಕೋಡಿ ಸೇರಿ ಒಟ್ಟು ಏಳು ಜನರು ಹಲ್ಲೆ ಮಾಡಿರುವ ಕುರಿತು ದೂರು ಸಲ್ಲಿಸಿದ್ದು, ಈ ಕುರಿತು ಮಹಾಗಾಂವ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೋಲಿಸರು ಶಂಕರ್, ದೇವರಾಜ್, ಸುನೀಲ್ ಹಾಗೂ ಸಿದ್ರಾಮ್ ಅವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಕಳೆದ ಗುರುವಾರ ರಾತ್ರಿ ಮೆಹಬೂಬ್ ಸುಭಾನಿ ಸಂದಲ್ ಕಾರ್ಯಕ್ರಮ ಜರುಗಿತು. ಜಗದೇವಪ್ಪ ಹಾಗೂ ಗೆಳೆಯರು ಇರುವ ಸ್ಥಳಕ್ಕೆ ಆಗಮಿಸಿದ ಆರೋಪಿಗಳು ಕುಡಿದ ಮತ್ತಿನಲ್ಲಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆ ಸಂದರ್ಭದಲ್ಲಿ ಮನೆಯವರಿಗೆ ಹೇಳಿ ಬರೋಣ ನಡೆಯಿರಿ ಎಂದು ಜಗದೇವಪ್ಪ ಶಂಕರ್ ಮನೆಗೆ ಹೋಗುತ್ತಿದ್ದಾಗ ನಮ್ಮ ಮನೆಗೆ ಹೋಗುತ್ತೀಯಾ ಎಂದು ಜಗದೇವಪ್ಪ ಮೇಲೆ ಆರೋಪಿಗಳು ಮಾರಕಾಸ್ತ್ರ ಹಾಗೂ ಕಟ್ಟಿಗೆಯಿಂದ ಹಲ್ಲೆಗೈದರು ಎಂದು ಕುಟುಂಬಸ್ಥರು ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿ ಉಮೇಶ್ ಚಿಕ್ಕಮಠ್, ಮಹಾಗಾಂವ್ ಠಾಣೆಯ ಪಿಎಸ್ಐ ಆಶಾ ರಾಠೋಡ್, ಕಮಲಾಪುರ ಠಾಣೆಯ ಪಿಎಸ್ಐ ಸಂಗೀತಾ ಸಿಂಧೆ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.