
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೮; ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹಾಗೂ ಮಾಧ್ಯಮದಲ್ಲಿ ಹೆಸರು ಮಾಡಲು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಅಟ್ರಾಸಿಟಿ ಕಾಯ್ದೆ ದುರ್ಬಳಕೆ ಮಾಡುತ್ತಾ ಸುಳ್ಳು ಪ್ರಕರಣ ದಾಖಲಿಸಿ ಸಮಾಜದಲ್ಲಿ ದಲಿತ ಸಮುದಾಯವನ್ನು ತಲೆತಗ್ಗಿಸುವಂತೆ ಮಾಡುತ್ತಿರುವವರ ವಿರುದ್ದ ಕಠಿಣಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಯುವಶಕ್ತಿ ವೇದಿಕೆಯ ಕಾರ್ಯಕರ್ತ ಚೇತನ್ ಕನ್ನಡಿಗ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವು ದಿನಗಳಿಂದ ಮಾಧ್ಯಮದಲ್ಲಿ ನಟ ಉಪೇಂದ್ರ ಹಾಗೂ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರು ತಮ್ಮ ಹಿಂದಿನ ಸಂದರ್ಶನಗಳಲ್ಲಿ ಗಾದೆ ರೂಪದಲ್ಲಿ ಹೇಳಿದ ವಾಕ್ಯವನ್ನು ನೆಪವಾಗಿ ಹಿಡಿದು ಇದಕ್ಕೆ ಅಟ್ರಾಸಿಟಿಯ ಮತ್ತೊಂದು ರೂಪ ನೀಡಿ ಇವರುಗಳು ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಅವರ ವಿರುದ್ಧ ರಾಜ್ಯದಲ್ಲಿ ಹಲವೆಡೆ ಕೇಸ್ ದಾಖಲು ಮಾಡಲಾಗಿದೆ, ಮತ್ತು ಇದು ದಿನದಿಂದ ದಿನಕ್ಕೆ ರಾಜಕೀಯ ತಿರುವು ಪಡೆಯುತ್ತಿದೆ. ನಟ ಉಪೇಂದ್ರ ಪರವಾಗಿ ಅಥವಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನರವರ ಪರವಾಗಿಯೂ ನಾವಿಲ್ಲ ಒಗ್ಗಟ್ಟಿನಲ್ಲಿ ಮುನ್ನಡೆಯುತ್ತಿರುವ ಸಮಾಜದಲ್ಲಿ, ಭಯಾ ಹಾಗೂ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಕೆಲ ನಕಲಿ ಹಾಗೂ ಮುಖವಾಡಧಾರಿ ಹೋರಾಟಗಾರರ ವಿರುದ್ಧ ಕಠಿಣ ಕ್ರಮವಾಗಬೇಕೆಂದು ಆಗ್ರಹಿಸಿದರು.ಆದರೆ, ಕೆಲವರು ನಮ್ಮ ದಲಿತ ಸಮುದಾಯದವರೇ ತಮ್ಮ ವೈಯಕ್ತಿಕ ಕಾರಣ ಹಾಗೂ ರಾಜಕೀಯ ಲಾಭಕ್ಕಾಗಿ, ಮಾಧ್ಯಮದಲ್ಲಿ ಹೆಸರು ಮಾಡಲು ಕ್ಷುಲ್ಲಕ ಕಾರಣಗಳಿಗೆ ಅಟ್ರಾಸಿಟಿ ಕಾಯ್ದೆಯನ್ನು ದುರ್ಬಳಕೆ ಮಾಡುತ್ತಾ ಸುಳ್ಳು ಕೇಸ್ ದಾಖಲಿಸಿ ಸಮಾಜದಲ್ಲಿ ದಲಿತ ಸಮುದಾಯವನ್ನು ತಲೆತಗ್ಗಿಸುವಂತೆ ಮಾಡುತ್ತಿದ್ದಾರೆ. ಇದರಿಂದ ಸಮಾಜ ನಮ್ಮನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿದೆ, ನಮ್ಮ ಸಹವಾಸವೇ ಬೇಡ ಎಂದು ದೂರ ಉಳಿಯುವ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದರು. ಬಾಬಾ ಸಾಹೇಬರು ನಮಗೆ ನೀಡಿರುವ ಅಟ್ರಾಸಿಟಿ ತಡೆ ಕಾಯ್ದೆ ಎಂಬ ಆಯುಧವಿದೆ, ಇದನ್ನು ಅಗತ್ಯವಿದ್ದಾಗ ನಿಜವಾಗಿಯೂ ದೌಜ್ಯನ್ಯ ಪ್ರಕರಣಗಳಲ್ಲಿ ಬಳಸಬೇಕು, ಆದರೆ ಕೆಲವರು ಸಮಾಜದಲ್ಲಿ ಕ್ಷುಲ್ಲಕ ಕಾರಣಗಳಿಗೆ ಇದನ್ನು ಪ್ರದರ್ಶಿಸುತ್ತಾ, ಅದನ್ನು ದುರ್ಬಳಕೆ ಮಾಡುತ್ತಾ ಸಂಪೂರ್ಣ ದಲಿತ ಸಮುದಾಯದ ಮಾನ ಹರಾಜು ಹಾಕುತ್ತಿದ್ದಾರೆ. ಆದ್ದರಿಂದ ಇಂತವರ ವಿರುದ್ಧ ಪ್ರಕರಣ ದಾಖಲಾಗಬೇಕು, ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರುಸುದ್ದಿಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಮಂಜುನಾಥ್, ಹೇಮಂತ್,ಜೆ.ವೆಂಕಟೇಶ್ ನಾಯ್ಕ್,ರಾಹುಲ್,ನಾಗರಾಜ್ ಸುರ್ವೆ,ಪವನ್ ರೇವಣಕರ್,ರವಿಕುಮಾರ್,ಪ್ರಕಾಶ್ ಉಪಸ್ಥಿತರಿದ್ದರು.