ವೈಚಾರಿಕತೆ ಅಳವಡಿಸಿಕೊಳ್ಳಲು ಸಿದ್ಧಬಸವ ಕಬಿರಾನಂದ ಸ್ವಾಮೀಜಿ ಕರೆ

ಜೇವರ್ಗಿ:ಆ.23: ಬುದ್ಧ, ಬಸವ, ಅಂಬೇಡ್ಕರ್ ವೈಚಾರಿಕ ಕ್ರಾಂತಿ ಉಂಟು ಮಾಡಿದ ಈ ನೆಲದಲ್ಲಿ ಮೌಢ್ಯತೆ ತುಂಬಿ ತುಳುಕಾಡುತ್ತಿರುವುದು ಬಹು ದೊಡ್ಡ ದುರಂತ ಎಂದು ಚಿಗರಳ್ಳಿ ಮರುಳಶಂಕರ ದೇವ ಮಠದ ಸಿದ್ಧಬಸವ ಕಬೀರ ಸ್ವಾಮಿ ನುಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ- ಕರ್ನಾಟಕ, ದಲಿತ ಸೇನೆ ತಾಲ್ಲೂಕು ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವೈಚಾರಿಕ ಚಿಂತನ-ವಿಚಾರ ಗೋಷ್ಠಿ ಹಾಗೂ ಬಸವ ಪಂಚಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳು ಜಗತ್ತಿಗೆ ಬೆಳಕು ನೀಡುವಂತಿವೆ ಎಂದು ತಿಳಿಸಿದರು.

ಮನಸ್ಸು ಪರಿವರ್ತನೆ ಮಾಡುವ ಮೂಲಕ ಸಮಾಜ ಅಭಿವೃದ್ಧಿಗೆ ಕಾರಣವಾಗುವ ವಿಚಾರಗಳು ಇಂದು ಬಹಳ ಅಗತ್ಯವಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ, ವೈಚಾರಿಕ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಜೀವಂತ ಹಾವಿಗಾಗಲಿ, ನಿರ್ಜೀವ ಕಲ್ಲಿಗಾಗಲಿ ಅಮೂಲ್ಯ ಪೌಷ್ಠಿಕ ಆಹಾರವಾಗಿರುವ ಹಾಲು ಚೆಲ್ಲಿ ವ್ಯರ್ಥ ಮಾಡುವುದು ನಾಗರಿಕ ಲಕ್ಷಣವಲ್ಲ ಎಂದು ತಿಳಿಸಿದರು.

ಬಸವಣ್ಣನವರ ಸ್ಮರಣೋತ್ಸವ ದಿನದಂದು ಆಚರಿಸಲಾಗುವ ಬಸವ ಪಂಚಮಿ ಜನರಲ್ಲಿನ ಮೌಢ್ಯ ನಿವಾರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಶಿವಕುಮಾರ ಗೋಲಾ, ದಲಿತ ಸೇನೆಯ ತಾಲ್ಲೂಕು ಅಧ್ಯಕ್ಷ ಶಿವಶರಣ ಮಂದೇವಾಲ, ಆಂದೋಲಾ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಡಿವಾಳಪ್ಪ ವೇದಿಕೆಯಲ್ಲಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ. ಕರಿಘೋಳೇಶ್ವರ ಅಧ್ಯಕ್ಷತೆ ವಹಿಸಿದ್ದರು. ಬಾಗೇಶ ಸ್ವಾಗತಿಸಿದರು. ಭೀಮಣ್ಣ ಎಸ್. ನಿರೂಪಿಸಿದರು.


ಭಾರತದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಗಳು ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ವೈಚಾರಿಕ ಚಿಂತನೆಗಳು ಅಡಗಿರುತ್ತವೆ. ಹೀಗಾಗಿ ನಮ್ಮ ಸಂಸ್ಕøತಿಯಲ್ಲಿ ಬರುವ ಎಲ್ಲ ಹಬ್ಬಗಳನ್ನು ವೈಜ್ಞಾನಿಕ, ವೈಚಾರಿಕ ನೆಲೆಯಲ್ಲಿ ಆಚರಿಸುವ ಮೂಲಕ ಸಂಪ್ರದಾಯವಾದಿಗಳು ತರುಕಿರುವ ಮೌಢ್ಯಗಳನ್ನು ಕಿತ್ತೆಸೆಯಬೇಕು.
-ಡಾ. ಕರಿಘೂಳೇಶ್ವರ, ಪ್ರಾಚಾರ್ಯರು, ಸ.ಪ್ರ.ದ. ಕಾಲೇಜು, ಕಲಬುರಗಿ