
ರಾಯಚೂರು,ಆ.೧೯
ವಿದ್ಯಾರ್ಥಿ ಜೀವನವು ಬಂಗಾರದ ಜೀವನವಾಗಿದ್ದು, ಪದವಿಯ ನಂತರ ಮುಂದೇನು ಎಂಬುದರ ಕುರಿತು ನಾನಾ ಪ್ರಶ್ನೆಗಳು ವಿದ್ಯಾರ್ಥಿಗಳ ಮನದಲ್ಲಿ ಮೂಡುವುದು ಸಹಜ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಲವು ವಿಷಯಗಳ ಜ್ಞಾನಾರ್ಜನೆಯೊಂದಿಗೆ ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಅಗತ್ಯವಾಗಿದೆ.
ವಿದ್ಯಾರ್ಥಿನಿಯರು ಆರಂಭದಲ್ಲೇ ಮುಂದಿನ ಉನ್ನತ ವ್ಯಾಸಂಗದ ಬಗ್ಗೆ ಯೋಚಿಸಿ ಅದರಂತೆ ತಮ್ಮ ಅಧ್ಯಯನವನ್ನು ನಡೆಸಿದರೆ ಉತ್ತಮ ಸಾಧನೆಗೈದು ಸ್ವಾವಲಂಭಿಗಳಾಗಿ ಬದುಕಲು ಸಾಧ್ಯ ಎಂದು ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಸೋಮ ಸುಭದ್ರಮ್ಮ ರಾಮನಗೌಡ ಮಹಿಳಾ ಮಹಾವಿದ್ಯಾಲಯದಲ್ಲಿ ಬಿ.ಎ, ಬಿ.ಕಾಂ ಮತ್ತು ಬಿ.ಎಸ್.ಡಬ್ಲ್ಯೂನ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕರಾದ ಚರಣ ಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪದವಿಯ ನಂತರ ಎಂ.ಬಿ.ಎ, ಬ್ಯಾಂಕಿಂಗ್ ಮತ್ತು ಎಲ್.ಐ.ಸಿಯಲ್ಲಿನ, ಮೊದಲಾದ ಉದೋಗವಕಾಶಗಳಿಗೆ ಸಂಭಂಧಿಸಿದಂತೆ ಮಾಹಿತಿ ಒದಗಿಸಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತೆಗೆದುಕೊಳ್ಳಬಹುದಾದ ವೃತ್ತಿ ಆಯ್ಕೆಗಳ ಕುರಿತು ಮಾರ್ಗದರ್ಶನ ನೀಡಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸುಗಳಿಸುವ ಕುರಿತು ತಿಳಿಸಿದರು. ಆತ್ಮವಿಶ್ವಾಸ, ಬದ್ಧತೆ, ಶ್ರದ್ಧೆ, ಪರಿಶ್ರಮಗಳನ್ನು ಮೈಗೂಡಿಸಿಕೊಂಡು ಸಕಾರಾತ್ಮಕ ಚಿಂತನೆಯೊಂದಿಗೆ ಉದ್ದೇಶಿತ ಗುರಿ ತಲುಪಲು ವಿದ್ಯಾರ್ಥಿನಿಯರಿಗೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಅಮರೇಗೌಡ ಎಸ್. ಮಾತನಾಡಿ ಬಿ.ಎ, ಬಿ.ಕಾಂ ಮತ್ತು ಬಿ.ಎಸ್.ಡಬ್ಲ್ಯೂನ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಲಾದ ಈ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಪದವಿ ಮುಗಿದ ನಂತರ ಯಾವ ವೃತ್ತಿ ಆಯ್ಕೆಮಾಡಿಕೊಳ್ಳಬೇಕು ಎನ್ನುವ ಮಾಹಿತಿ ನೀಡುತ್ತದೆ.
ಮುಂದೆ ಗುರಿ ಹಿಂದೆ ಗುರು ಇರಬೇಕು ಎನ್ನುವ ಹಾಗೆ ಪ್ರತಿಯೊಬ್ಬ ವಿದ್ಯಾರ್ಥಿಗೆ ತನ್ನ ಗುರಿ ಸಾದಿಸಬೇಕಾದರೆ ಸ್ಪಷ್ಟವಾದ ಮಾರ್ಗದರ್ಶನ ಅತ್ಯವಶ್ಯಕವಾಗಿರುತ್ತದೆ. ಪದವಿ ನಂತರ ಯಾವ ಕ್ಷೇತ್ರಗಳಲ್ಲಿ ಉದ್ಯೋಗದ ಅವಕಾಶಗಳಿವೆ. ಉದ್ಯೋಗಗಳಿಗಾಗಿ ಹೇಗೆ ತಯಾರಿ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೇಗೆ ಯಶಸ್ವಿಯಾಗಬೇಕು. ಪದವಿ ನಂತರ ಉನ್ನತ ಶಿಕ್ಷಣಕ್ಕೆ ಹೇಗೆ ಅವಕಾಶಗಳಿವೆ ಎನ್ನುವ ಹಲವಾರು ಪ್ರಶ್ನೆಗಳಿಗೆ ಈ ಕಾರ್ಯಕ್ರಮ ಮಾರ್ಗದರ್ಶನ ಮಾಡುತ್ತದೆ ಎಂದು ತಿಳಿಸಿದರು.
ವೇದಿಕೆಯ ಮೇಲೆ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ ಸಂಯೋಜಕರಾದ ಸಂಜಯ್ ಪವಾರ್, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಸಣ್ಣವೀರನಗೌಡ, ದೇಶಪಾಂಡೆ ಸ್ಕಿಲ್ಲಿಂಗ್ನ ದೀಪಾ ಎಸ್, ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ವಾತಿ ಪ್ರಾರ್ಥನೆ ಹಾಡಿದರು. ಐ.ಕ್ಯೂ.ಎ.ಸಿ ಸಂಯೋಜಕರಾದ ಸಂಜಯ್ ಪವಾರ್ ಸ್ವಾಗತ ಕೋರಿದರು, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಸಣ್ಣವೀರನಗೌಡ ಪ್ರಾಸ್ತಾವಿಕ ನುಡಿದರು, ನಾಜಿಯಾ ಸುಲ್ತಾನ ವಂದಿಸಿದರೆ, ತ್ರ್ರಿವೇಣಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬಿ.ಎ, ಬಿ.ಕಾಂ ಮತ್ತು ಬಿ.ಎಸ್.ಡಬ್ಲ್ಯೂ ನ ಅಂತಿಮ ವರ್ಷದ ವಿದ್ಯಾರ್ಥಿನಿಯರು ಹಾಗೂ ಬೋಧಕ & ಬೋಧಕೇತರ ಸಿಬ್ಬಂದಿಯವರು ಪಾಲ್ಗೊಂಡಿದ್ದರು.