
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೧೯: ನಮ್ಮ ವೃತ್ತಿಯಲ್ಲಿ ಯಶಸ್ಸು ಪಡೆಯಲು ಸಮಷ್ಠಿ ಪ್ರಜ್ಞೆ ಅಗತ್ಯ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್ನಲ್ಲಿ ಜಗಳೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಯಾಗಿರುವ ಹಿರಿಯ ಉಪನ್ಯಾಸಕ ಈ.ಹಾಲಮೂರ್ತಿ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶೈಕ್ಷಣಿಕ ಭಾಗೀದಾರರಲ್ಲಿ ಸಮಷ್ಠಿಭಾವ ಮುಖ್ಯವಾದುದು. ಹಾಲಮೂರ್ತಿಯವರು ಡಯಟ್ ಕಚೇರಿಯಲ್ಲಿ ಸೇವಾಪೂರ್ವ ಶಿಕ್ಷಣ ವಿಭಾಗದ ನೋಡಲ್ ಅಧಿಕಾರಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಹಿರಿಯ ಉಪನ್ಯಾಸಕ ಹಾಲಮೂರ್ತಿ ಮಾತನಾಡಿ, ನಮ್ಮ ವೃತ್ತಿಯನ್ನು ಪ್ರೀತಿಸಬೇಕು. ಪ್ರೌಢಶಾಲಾ ಮುಖ್ಯ ಶಿಕ್ಷಕನಾಗಿ, ದಾವಣಗೆರೆ ಡಯಟ್ನಲ್ಲಿ ಉಪನ್ಯಾಸಕನಾಗಿ, ಚಿತ್ರದುರ್ಗ ಡಯಟ್ನಲ್ಲಿ 3 ವರ್ಷ 7 ತಿಂಗಳು ಹಿರಿಯ ಉಪನ್ಯಾಸಕನಾಗಿ ಕೆಲಸ ನಿರ್ವಹಿಸಿರುವುದು ನನಗೆ ತೃಪ್ತಿ ತಂದಿದೆ ಎಂದರು. ಜಗಳೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಇಲಾಖೆಯ ಅಧಿಕಾರಿಗಳಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಡಯಟ್ನಲ್ಲಿ ಕೆಲಸ ಮಾಡಲು ಮಾರ್ಗದರ್ಶನ ನೀಡಿದ ಪ್ರಾಂಶುಪಾಲರು, ಅಧಿಕಾರಿ ವರ್ಗದವರಿಗೆ ಹಾಗೂ ಕಚೇರಿ ಸಿಬ್ಬಂದಿವರ್ಗದವರಿಗೆ ಅಭಿನಂದನೆ ಸಲ್ಲಿಸಿದರು.ಉಪ ಪ್ರಾಚಾರ್ಯ ಡಿ.ಆರ್.ಕೃಷ್ಣಮೂರ್ತಿ, ಹಿರಿಯ ಉಪನ್ಯಾಸಕರಾದ ಸಿ.ಎಸ್.ವೆಂಕಟೇಶಪ್ಪ. ಎಸ್.ಸಿ.ಪ್ರಸಾದ್, ಎಸ್.ಜ್ಞಾನೇಶ್ವರ, ಹೆಚ್.ಗಿರಿಜಾ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಬಿ.ಎಸ್.ನಿತ್ಯಾನಂದ, ಬಿ.ಆರ್.ಸಿ ಗಳಾದ ಸಂಪತ್ ಕುಮಾರ್, ಶ್ರೀನಿವಾಸ್ ಮತ್ತಿತರರಿದ್ದರು.