
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.20: ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ
ರಾಮನಗೌಡರ ಅವರ ರಾಜೀನಾಮೆಗೆ ಆಗ್ರಹಿಸಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಂ.ಮಹೇಶ್ವರ ಸ್ವಾಮಿ ಮತ್ತು ಸಂಘದ ಸದಸ್ಯರು ಧರಣಿ ಸತ್ಯಾಗ್ರಹ ನಡೆಸಿದರು.
ಸಂಘದ ಕಚೇರಿಯ ಆವರಣದಲ್ಲಿ ಇಂದು ಮಹಾತ್ಮ ಗಾಂಧಿ ಪೋಟೋ ಇಟ್ಟುಕೊಂಡು ಬೆಳಿಗ್ಗೆ 11 ಗಂಟೆಯಿಂದ ಧರಣಿ ಸತ್ಯಾಗ್ರಹ ಆರಂಭಿಸಿದರು. ನ.18 ರಂದು ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಅಧ್ಯಕ್ಷ ರಾಮನಗೌಡರು ಅವಾಚ್ಯ ಶಬ್ದಗಳಿಂದ ನನ್ನನ್ನು, ನನ್ನ ತಾಯಿಯನ್ನು ನಿಂದಿಸಿ. ಅನಾಗರಿಕ ವರ್ತನೆ ತೋರಿ ಹಲ್ಲೆಗೆ ಮುಂದಾಗಿರುವುದನ್ನು ನಾನು ಖಂಡಿಸುವೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ನನ್ನ ಅಭಿಪ್ರಾಯಗಳನ್ನು ತಿಳಿಸುವ ಸಂದರ್ಭದಲ್ಲಿ ಅವರು ಸಭೆಯ ಅಧ್ಯಕ್ಷತೆಯ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ. ಸದಸ್ಯರುಗಳ ಅಭಿಪ್ರಾಯ ಆಲಿಸಿ ಸೂಕ್ತ ಉತ್ತರಗಳನ್ನು ತಾವು ಇಲ್ಲವೇ ಕಾರ್ಯದರ್ಶಿಗಳ ಮೂಲಕ ನೀಡುವ ಹೊಣೆಗಾರಿಕೆಯನ್ನು ಮರೆತು. ತಾಳ್ಮೆ, ವಿವೇಚನೆಯನ್ನು ತೋರದೆ ಪೂರ್ವ ನಿಯೋಜಿತವಾಗಿ ಸಭೆಯಲ್ಲಿ ನನ್ನ ಮೇಲೆ ಕೋಪ ಪ್ರದರ್ಶಿಸುಸುತ್ತಾ, ಹಲ್ಲು ಕಡಿಯುತ್ತಾ, ಅನಾವಶ್ಯಕವಾಗಿ ವಾಗ್ವಾದ ನಡೆಸಿ ಅಶ್ಲೀಲ ಪದ ಬಳಸಿ ನನ್ನನ್ನು ನಿಂದಿಸಿರುತ್ತಾರೆ ಹಾಗೂ ಚುನಾಯಿತ ಪ್ರತಿನಿಧಿಯಾಗಿರುವ ನನ್ನನ್ನು ಗೆಟೌಟ್ ಎನ್ನುವ ಪದ ಬಳಸುವುದರ ಮೂಲಕ ನನ್ನ ಹಕ್ಕಿಗೆ ಧಕ್ಕೆ ತಂದಿದ್ದಾರೆ ಇವರ ವರ್ತನೆಯು ಸಂಘದ ಸಂಪ್ರದಾಯ ಮತ್ತು ಬೈಲಾಗಳಿಗೆ ತದ್ವಿರುದ್ಧವಾಗಿದೆ.
ಕೇವಲ ನಾಲ್ಕು ತಿಂಗಳ ಹಿಂದೆ ಸಂಘದ ಅಧ್ಯಕ್ಷರಾಗಿರುವ ರಾಮನಗೌಡರು ಸರ್ವಾಧಿಕಾರಿಯಂತೆ ಸಂಘದ ಬೈಲಾಗಳಿಗೆ ವಿರುದ್ಧವಾಗಿ ಏಕಮುಖವಾಗಿ ಅಧಿಕಾರ ಚಲಾಯಿಸುತ್ತಿರುವ ಬಗ್ಗೆ ಕೂಡ ನನ್ನ ಆಕ್ಷೇಪಣೆಯನ್ನು ವ್ಯಕ್ತಪಡಿಸುತ್ತಿರುವುದನ್ನು ಸಹಿಸಲು ಆಗದೆ ಈ ಅನಾಗರಿಕ ವರ್ತನೆ ತೋರಿದ್ದಾರೆ ಇವರ ದುರ್ವರ್ತನೆಯನ್ನು ಕಾರ್ಯಕಾರಿ ಸಮಿತಿ ಸದಸ್ಯರು ಖಂಡಿಸಿ ರಾಜೀನಾಮೆ ಪಡೆಯಲು ಒತ್ತಾಯಿಸುವೆ ಎಂದಿದ್ದಾರೆ.
ಕರ್ನಾಟಕ ಸರ್ಕಾರದ ಸಂಘ ಸಂಸ್ಥೆಗಳ ಉಪನಿಬಂಧಕರು ಸಂಘದ ಅಧ್ಯಕ್ಷರಿಗೆ ಪತ್ರ ಬರೆದು ಸಂಘದ ಬೈಲಾಗಳನ್ನು ಉಲ್ಲಂಘಿಸಿದೆ. ಉಲ್ಲಂಘನೆಯಾಗಿರುವ ಎಲ್ಲಾ ನ್ಯೂನ್ಯತೆಗಳನ್ನು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ವರದಿ ನೀಡುವಂತೆ ತಿಳಿಸಿ. ಮುಂದೆ ಯಾವುದೇ ವಿಷಯದಲ್ಲಿ ಸಂಘದ ಬೈಲಾ ಮತ್ತು ನಿಯಮಗಳ ಉಲ್ಲಂಘನೆಯಾದಲ್ಲಿ ಆಡಳಿತ ಅಧಿಕಾರಿಯನ್ನು ನೇಮಿಸಬೇಕಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಕಾರಣ ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಧರಣಿ ಸತ್ಯಾಗ್ರಹದಲ್ಲಿ, ವಿ.ಎಸ್.ಮರಿದೇವಯ್ಯ, ಕೋಳೂರು ಚಂದ್ರಶೇಖರಗೌಡ, ಗೌರಿಶಂಕರ ಸ್ವಾಮಿ ಮೊದಲಾದವರು ಇದ್ದರು.