ವೀರಮಾತೆಯರಿಂದ ವೀರಾಕ್ಷತೆ ಸಂಗ್ರಹಿಸಿ ಭಾರತಮಾತೆಗೆ ಸಮರ್ಪಣೆ – ದಯಾನಂದ ಸಜ್ಜನ್.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 27 :- ಕಾರ್ಗಿಲ್ ವಿಜಯೋತ್ಸವದ ಸಂಕೇತವಾಗಿ ದೇಶದ ಸೇವೆಗೆ ಮಗನನ್ನು ಕಳುಹಿಸಿದ ವೀರಯೋಧರ ತಾಯಂದಿರಾದ ವೀರಮಾತೆಯರ ಕೈಗಳಿಂದ ವೀರಾಕ್ಷತೆ ಪಡೆದುಕೊಂಡು ಭಾರತಾಂಬೆಯ ಮಡಿಲಿಗೆ ಸಮರ್ಪಿಸಿ  ದೇಶಪ್ರೇಮ ಮೆರೆಸುವ ಕಾರ್ಯವನ್ನು ಯುವಬ್ರಿಗೇಡ್ ಮಾಡಲು ಮುಂದಾಗಿದ್ದು ಈ ಕಾರ್ಯದಲ್ಲಿ ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದ ವೀರಯೋಧನ ತಾಯಿಂದ ವೀರಾಕ್ಷತೆ ಪಡೆದುಕೊಳ್ಳಲಾಯಿತು ಎಂದು ಕೂಡ್ಲಿಗಿ ಯುವಬ್ರಿಗೇಡ್ ದಯಾನಂದ ಸಜ್ಜನ್ ತಿಳಿಸಿದರು.
ಅವರು ತಾಲೂಕಿನ  ಹಿರೇಕುಂಬಳಗುಂಟೆ ಗ್ರಾಮದಲ್ಲಿ ಕಾರ್ಗಿಲ್ ವಿಜಯ್ ದಿವಸ ಅಂಗವಾಗಿ ಯೋಧ ಸದಾನಂದ್ ಅವರ ತಾಯಿಯಿಂದ ಬುಧವಾರ ಯುವ ಬ್ರಿಗೇಡ್ ತಂಡ ವೀರಾಕ್ಷತೆ ಸಂಗ್ರಹ ಸಂದರ್ಭದಲ್ಲಿ ಮಾತನಾಡುತ್ತ  ವೀರ ಯೋಧರ  ತಾಯಿಯಂದಿರ  ಅಶಿರ್ವಾದ ಸದಾ ಇರಬೇಕು ಎಂದು  ‘ವೀರಾಕ್ಷತೆ’ಪಡೆದುಕೊಂಡರು.
ಯುವ ಬ್ರಿಗೇಡ್ ನ ನಾಗರಾಜ್ ಗೌಡ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ  ಅ.13,14,15 ರಂದು ಯುವ ಬ್ರಿಗೆಡ್ ವತಿಯಿಂದ ಬೆಂಗಳೂರಿನ ವಿಭೂತಿಪುರದಲ್ಲಿ ನಡೆಯುವ ಸ್ವಾತಂತ್ರ್ಯ ಶ್ರಾವಣದಲ್ಲಿ ರಾಜ್ಯಾದ್ಯಂತ ಯೋಧರ ತಾಯಂದಿರಿಂದ  ಪಡೆದ ವೀರಾಕ್ಷತೆಯನ್ನು ಭಾರತಂಭೆಗೆ ಸಮರ್ಪಿಸಲಾಗುವುದು ಎಂದರು.
ಯೋಧರನ್ನು ಸಾಕಿ,ಸಲುಹಿ ದೇಶ ಸೇವೆಗೆ ಸಮರ್ಪಿಸಿರುವ , ತಾಯಿಯಂದಿರು  ಸಹ ಭಾರತ ಮಾತೆಯರು ಇದ್ದಂತೆ,  ಅವರ  ಶ್ರೀರಕ್ಷೆ ದೇಶದ ಪ್ರತಿಯೊಬ್ಬರ ಮೇಲಿರಲ್ಲಿದ್ದು, ಅ ನಿಟ್ಟಿನಲ್ಲಿ ಯುವ ಬ್ರಿಗೇಡ್ ನಿಂದ ವೀರಯೋಧರ ತಾಯಂದಿರಿಂದ ವೀರಾಕ್ಷತೆ ಪಡೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಯೋಧ ಸದಾನಂದ್, ಯುವ ಬ್ರಿಗೇಡ್ ನ  ಕೊಟ್ರೇಶ್ ತುಮ್ಮಿನಕಟ್ಟೆ, ಕೆ.ಎಸ್‌.ವಿನೋದ್ ಕುಮಾರ್, ಹುಲಿಕೇರೆ ಶಿವಕುಮಾರ್ ಇತರರಿದ್ದರು.