ಹುಬ್ಬಳ್ಳಿ,ಜೂ.24: ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದು ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ. ಮುಂದಿನ ದಿನಗಳಲ್ಲಿ ಸಭಾಪತಿ ಮಾಡುವುದು ಕಾಂಗ್ರೆಸ್ ಗೆ ಬಿಟ್ಟ ವಿಚಾರ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರಕ್ಕೆ ವಿಧಾನ ಪರಿಷತ್ ಸದಸ್ಯರಾಗಿ ಮೊದಲ ಬಾರಿಗೆ ಆಗಮಸಿದ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾಟಿ ಪರಿಷತ್ ನಲ್ಲಿ ಜನಪ್ರತಿನಿಧಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನನಗೊಂದು ಅವಕಾಶ ಮಾಡಿಕೊಟ್ಟಿದ್ದು, ಕಾಂಗ್ರೆಸ್ ಪಕ್ಷದ ರಾಷ್ಟ್ರ ಹಾಗೂ ರಾಜ್ಯದ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆಂದರು.
ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಾಗ ಕಾಂಗ್ರೆಸ್ ಜಗದೀಶ್ ಶೆಟ್ಟರ್ ಗೆ ಇನ್ನೂ ಉನ್ನತ ಸ್ಥಾನಮಾನಗಳನ್ನು ನೀಡುವುದಾಗಿ ಹೇಳಿದೆ. ಈ ವಿಷಯವನ್ನು ಪಕ್ಷ ಇನ್ನೂ ಪ್ರಸ್ತಾಪ ಮಾಡಿಲ್ಲ ಹೀಗಾಗಿ ಕಾಯ್ದು ನೋಡೋಣ ಎಂದವರು ನುಡಿದರು.
ಯಾವುದೇ ಜವಾಬ್ದಾರಿ ನೀಡಿದರೂ ನಾನು ಸಿದ್ಧ:
ಲೋಕಸಭಾ ಚುನಾವಣೆ ದೃಷ್ಟಿಯಿಂದ ಈಗಾಗಲೇ ನಮ್ಮ ಪಕ್ಷದ ವರಿಷ್ಠರ ಜೊತೆಗೆ ಚರ್ಚೆ ಮಾಡಿದ್ದೇನೆ. ಎಲ್ಲಿಯೇ ಪ್ರವಾಸ ಮಾಡಿ ಎಂದರೂ ನಾನು ಸಂಚರಿಸಲು ಸಿದ್ಧ ಎಂದು ಅವರು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಗೆಲ್ಲಲು ನಾನೂ ಪ್ರಯತ್ನ ಮಾಡುತ್ತೇನೆ. ಉತ್ತರ ಕರ್ನಾಟಕದಲ್ಲಿ 11 ಲೋಕಸಭಾ ಕ್ಷೇತ್ರಗಳು ಇವೆ. ಅದರಲ್ಲಿ 6ರಿಂದ 7 ಕ್ಷೇತ್ರದಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ನಮಗೆ ಈಗಾಗಲೇ ಜನರಿಂದ ಬೆಂಬಲ ಸಿಗುತ್ತಿದೆ ಎಂದವರು ನುಡಿದರು.
ಉತ್ತರ ಕರ್ನಾಟಕದ ಜಲ್ವಂತ ಸಮಸ್ಯೆಗಳ ಬಗ್ಗೆ ಪರಿಷತ್ ನಲ್ಲಿ ಚರ್ಚೆ ಮಾಡುತ್ತೇನೆ. ಈ ಭಾಗದ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಅವುಗಳನ್ನು ಆದಷ್ಟು ಬೇಗ ಪರಿಹಾರ ಮಾಡಲಿಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.
ಬಿಜೆಪಿಯಲ್ಲಿ ಇದೀಗ ಬಹಳಷ್ಟು ಅಸಮಾಧಾನದ ವಾತಾವರಣವಿದ್ದು ಅದು ಯಾವಾಗ ಸ್ಪೋಟ ಆಗುತ್ತೋ ಗೊತ್ತಿಲ್ಲ ಆದರೆ ನಾವು ಸೋತ ಬಿಜೆಪಿ ಅಭ್ಯರ್ಥಿಗಳನ್ನು ಸೆಳೆಯುತ್ತಿಲ್ಲ ಎಂದು ಅವರು ಹೇಳಿದರು.
ಹೆಸರು ಬಹಿರಂಗ ಪಡಿಸಲಿ:
ಒಳ ಒಪ್ಪಂದ ಮಾಡಿದರು ಯಾರು? ಅವರ ಹೆಸರನ್ನು ಸಂಸದ ಪ್ರತಾಪ್ ಸಿಂಹ ಬಹಿರಂಗಪಡಿಸಲಿ. ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡುವ ವಿಚಾರವನ್ನು ಅವರು ಬಹಿರಂಗ ಮಾಡಿದ್ದಾರೆ. ಬಹಿರಂಗವಾಗಿ ಅವರ ಹೆಸರನ್ನು ಹೇಳಿ ಬಿಡಲಿ, ಅವರು ಯಾರು ಎಂಬುದು ಜನರಿಗೆ ಗೊತ್ತಾಗಲಿ ಎಂದು ಶೆಟ್ಟರ್ ಸವಾಲ್ ಹಾಕಿದರು.