ವಿಶ್ವ ಮೌಖಿಕ ಆರೋಗ್ಯ ದಿನಾಚರಣೆ

ತುಮಕೂರು, ಏ. ೧- ನಗರದ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜು ಮತ್ತು ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ಇಲಾಖೆ ವತಿಯಿಂದ ತುಮಕೂರಿನ ರೈಲ್ವೆ ನಿಲ್ದಾಣದ ಹೊರಾಂಗಣದಲ್ಲಿ ಬಾಯಿಯ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿಶ್ವ ಮೌಖಿಕ ಆರೋಗ್ಯ ದಿನದ ಅಂಗವಾಗಿ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ದಂತ ಚಿಕಿತ್ಸಾ ವಿಭಾಗದ ಅಂತಿಮ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಬಾಯಿಯ ಆರೋಗ್ಯಕ್ಕೆ (ಕ್ಯಾನ್ಸರ್) ಕಾಳಜಿ ವಹಿಸುವ ಕುರಿತು ಶೈಕ್ಷಣಿಕ ಕರ ಪತ್ರಗಳನ್ನು ಪ್ರದರ್ಶಿಸಿ ಮತ್ತು ಜಾಗೃತಿ ನೃತ್ಯದ ಮೂಲಕ ತಂಬಾಕಿನಿಂದ ಉಂಟಾಗುವ ಹಾನಿಯ ಕುರಿತು ಅರಿವು ಮೂಡಿಸಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರದ ಡಾ. ಭರತೇಶ, ವೈದ್ಯರಾದ ಡಾ. ದರ್ಶನಾ, ಡಾ. ಮೋಹನ್ ಹಾಗೂ ದಂತ ವೈದ್ಯಕೀಯ ವಿದ್ಯಾರ್ಥಿಗಳ ತಂಡ ಭಾಗಿಯಾಗಿದ್ದರು.