ವಿಶ್ವ ಭ್ರಾತೃತ್ವವನ್ನು ಸಾರಿದ ಮೇರು ದಾರ್ಶನಿಕ ಟ್ಯಾಗೋರ್

ಕಲಬುರಗಿ:ಮೇ.7: ರವೀಂದ್ರನಾಥ ಟ್ಯಾಗೋರ ಅವರು ರಾಷ್ಟ್ರಗೀತೆಯ ರಚನಾಕಾರ, ಸ್ವತಂತ್ರ ಮನೋಭಾವದ ಮೇರು ವ್ಯಕ್ತಿ. ಶಾಲಾ-ಕಾಲೇಜುಗಳಲ್ಲಿ ಶಿಕ್ಷಣವನ್ನು ಪಡೆಯದೆ, ಯಾವ ಪದವಿ, ಅರ್ಹತೆಯು ಇಲ್ಲದೆ ತಮ್ಮ ಅದ್ಭುತ ಸಾಹಿತ್ಯ ಸಾಧನೆಯಿಂದ ಭಾರತಕ್ಕೆ ಅಷ್ಟೆ ಅಲ್ಲದೇ ಇಡೀ ಏಷಿಯಾ ಖಂಡದಲ್ಲಿಯೇ ಪ್ರಥಮ ಬಾರಿಗೆ ನೋಬೆಲ್ ಪಾರಿತೋಷಕ ತಂದು ಕೊಡುವ ಮೂಲಕ ನಮ್ಮ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಟ್ಯಾಗೋರ್ ಅವರು ವಿಶ್ವ ಭ್ರಾತೃತ್ವವನ್ನು ಸಾರಿದ ಮೇರು ದಾರ್ಶನಿಕರಾಗಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಮುತ್ತಾ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ರವೀಂದ್ರನಾಥ ಟ್ಯಾಗೋರರ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಟ್ಯಾಗೋರ್ ಮೇರು ಕವಿ, ಆಧ್ಯಾತಿಕತೆಯ ಮಹಾನ ನಾಯಕ, ‘ವಿಶ್ವಭಾರತಿ’ ಶಿಕ್ಷಣ ಸಂಸ್ಥೆ ಸ್ಥಾಪಕ, ನಮ್ಮ ದೇಶದ ರಾಷ್ಟ್ರಗೀತೆ ರಚನಾಕಾರರಾಗಿದ್ದಾರೆ, ‘ಭಗ್ನ ಹೃದಯ’, ‘ಸಂಧ್ಯಾ ಸಂಗೀತ’, ‘ನಿರ್ಝರೇರ್ ಸ್ವಪ್ನಭಂಗ’, ‘ಪ್ರಭಾತ ಸಂಗೀತ’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಶಿಕ್ಷಣದ ಕುರಿತು ಟ್ಯಾಗೋರರು ಸಾಕಷ್ಟು ಹೊಸ ಪರಿಕಲ್ಪನೆಗಳನ್ನು ನೀಡಿದ್ದಾರೆ. ಇವರದು ಪರಿಪೂರ್ಣ ಸ್ವಾತಂತ್ರಕ್ಕಾಗಿ ಹಂಬಲಿಸುವ, ಹೋರಾಡುವ ಮನೋಭಾವ ಆಗಿತ್ತು. ಅದಕ್ಕೆ ತಕ್ಕಂತೆ ಅವರ ಸ್ವರಾಜ್ಯದ ಕುರಿತಾದ ಚಿಂತನೆಗಳು ಕೂಡಾ ವಿಭಿನ್ನವಾಗಿದ್ದವು. ಸಾಂಪ್ರದಾಯಿತ ಸಮಾಜವನ್ನು ಪುನರುಜ್ಜೀವನಗೊಳಿಸುವ ಕಾರ್ಯ ಮಾಡಿದ್ದು ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.

   ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಮಾತನಾಡಿ, ಟ್ಯಾಗೋರ ಅವರು ಉತ್ತಮ ಬರಹಗಾರರು, ಸಮಾಜ ಸುಧಾರಕರು.ಅವರ ಪ್ರತಿಯೊಂದು ಕೃತಿಯು ಜೀವನವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಪ್ರಮುಖರಾದ ನಿಶಾ, ಅಯನ್, ಆರಾಧ್ಯ, ಇರ್ಫಾನ್, ರುಕುಮ್ ಪಟೇಲ್, ಆದಿತ್ಯ, ಸಾನ್ವಿ ಸೇರಿದಂತೆ ಮತ್ತಿತರರಿದ್ದರು.