ವಿಶ್ವೇಶ್ವರಯ್ಯ ಕೊಡುಗೆ ಅನನ್ಯ: ಡಿಕೆಶಿ

ಬೆಂಗಳೂರು, ಸೆ, ೧೫- ದೇಶದ ಶ್ರೇಷ್ಠ ಇಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯ ಅವರು ಸದಾ ಸ್ಮರಣೀಯರು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಶ್ವೇಶ್ವರಯ್ಯ . ಅವರ ದೂರದೃಷ್ಟಿಯಿಂದಾಗಿ ನಗರದ ಜನತೆಗೆ ಕಾವೇರಿ ನೀರು ದೊರೆತಿದೆ. ಜೊತೆಗೆ ಅವರ ದೂರಗಾಮಿ ವಿದ್ಯುತ್ ಯೋಜನೆಗಳ ಫಲವನ್ನು ಅನುಭವಿಸುತ್ತಿದ್ದೇವೆ. ರಾಜ್ಯ ಹಾಗೂ ದೇಶಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಹೇಳಿದ್ದಾರೆ.
ನಗರದ ಕೆ. ಆರ್. ವೃತ್ತದ ಬಳಿ ಸರ್.ಎಂ ವಿಶ್ವೇಶ್ವರಯ್ಯ ಅವರ ೧೬೩ ನೇ ಜನ್ಮದಿನದ ಹಿನ್ನೆಲೆಯಲ್ಲಿ ಪುತ್ಥಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಡಿ.ಕೆ. ಶಿವಕುಮಾರ್ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕರ್ನಾಟಕ ಇಂಜಿನಿಯರ್ ಗಳ ಒಕ್ಕೂಟದ ಅಧ್ಯಕ್ಷ ವೆಂಕಟಶಿವರೆಡ್ಡಿ ಮಾತನಾಡಿ ಇಂಜಿನಿಯರ್ ಗಳು ಸರ್.ಎಂ.ವಿ ಅವರನ್ನು ಪ್ರೇರಣೆಯಾಗಿಟ್ಟುಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಅಂಬೇಡ್ಕರ್, ಗಾಂಧಿ ಜಯಂತಿ ಮಾದರಿಯಲ್ಲಿ ಸರ್ಕಾರವೇ ವಿಶ್ವೇಶ್ವರಯ್ಯ ಜಯಂತಿ ಆಚರಣೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ
ಇಂಜಿನಿಯರ್ ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಟಿ ನಾಗರಾಜ್, ಒಕ್ಕೂಟದ ಉಪಾಧ್ಯಕ್ಷ ಡಿ.ಕೆ ದೇವರಾಜ್, ಕೆ.ಇ.ಬಿ ಇಂಜಿನೀಯರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕೆ.ಎಲ್ ಸುಧಾಕರ್ ರೆಡ್ಡಿ, ಉಪಾಧ್ಯಕ್ಷ ಶಿವಾನಂದ ಹೂಗಾರ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳ ಅಧ್ಯಕ್ಷ ಕೃಷ್ಣಮೂರ್ತಿ, ತಾಂತ್ರಿಕ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಮುಖ್ಯ ಇಂಜಿನಿಯರಗಳು ಹಾಗೂ ಸರ್ಕಾರದ ತಾಂತ್ರಿಕ ಇಲಾಖೆ, ಮಂಡಳಿ, ನಿಗಮಗಳ ಎಲ್ಲ ಇಂಜಿನೀಯರುಗಳು ಭಾಗವಹಿಸಿದ್ದರು.