ವಿಮಾನದಲ್ಲಿ ಧೂಮಪಾನ ಯುವಕ ಸೆರೆ

ಬೆಂಗಳೂರು,ಮಾ.೧೮- ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ವಿಮಾನದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ಘಟನೆ ಮಾಸುವ ಮುನ್ನವೇ ಅಸ್ಸಾಂನಿಂದ ನಗರಕ್ಕೆ ಬರುತ್ತಿದ್ದ ವಿಮಾನದ ಶೌಚಾಲಯದಲ್ಲಿ ಯುವಕನೋರ್ವ ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ್ದಾನೆ.
ಅಸ್ಸಾಂ ನಿಂದ ಬಂದ ೬ಇ ೭೧೬ ಇಂಡಿಗೂ ವಿಮಾನದಲ್ಲಿ ಮಧ್ಯರಾತ್ರಿ ೧:೩೦ ರ ವೇಳೆ ಪ್ರಯಾಣಿಕ ಶೇಹರಿ ಚೌದರಿ ಧೂಮಪಾನ ಮಾಡ ತೊಡಗಿದ್ದಾನೆ.
ವಿಮಾನದ ಶೌಚಾಲಯದಲ್ಲಿ ಹೊಗೆ ಮತ್ತು ವಾಸನೆ ಬಂದ ಹಿನ್ನೆಲೆ ವಿಮಾನದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರಯಾಣಿಕ ಸಿಗರೇಟ್ ಸೇದಿರುವುದು ಬೆಳಕಿಗೆ ಬಂದಿದೆ.
ವಿಮಾನವು ಬೆಂಗಳೂರಿನಲ್ಲಿ ಇಳಿದ ಕೂಡಲೇ ಏರ್ ಲೈನ್ಸ್ ಸಿಬ್ಬಂದಿ ಧೂಮಪಾನ ಮಾಡಿದ ಪ್ರಯಾಣಿಕನನ್ನು ಭದ್ರತಾ ಪಡೆಯ ವಶಕ್ಕೆ ನೀಡಿದ್ದಾರೆ. ಪ್ರಯಾಣಿಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಏರ್ಪೋಟ್ ಪೊಲೀಸರು ಬಂಧಿಸಿದ್ದಾರೆ.
ವಿಮಾನ ನಿಲ್ದಾಣದ ಭದ್ರತಾ ಪಡೆಯ ನಿರ್ಲಕ್ಷ್ಯದಿಂದ ಪದೇ ಪದೇ ವಿಮಾನಗಳಲ್ಲಿ ದೂಮಫಾನ ಪ್ರಕರಣ ಪತ್ತೆಯಾಗುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಆಕಾಶದಲ್ಲಿ ಹಾರುವ ವೇಳೆ ಧೂಮಪಾನದಿಂದ ಅಗ್ನಿ ಅವಾಂತರವಾದರೆ ಯಾರು ಹೊಣೆ ಎನ್ನುವ ಆತಂಕ ಎದುರಾಗಿದೆ.
ಕಳೆದ ಮಾ.೫ರಂದು ರಾತ್ರಿ ೯.೫೦ಕ್ಕೆ ಕೋಲ್ಕತ್ತಾದಿಂದ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಪ್ರಿಯಾಂಕ ಎಂಬ ಯುವತಿ ಇಂಡಿಗೋ ೬ಇ೭೧೬ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಳು. ವಿಮಾನ ಬೆಂಗಳೂರಿಗೆ ಲ್ಯಾಂಡ್ ಆಗುವ ಅರ್ಧ ಗಂಟೆ ಮುನ್ನ ಸಿಗರೇಟ್ ಸೇದಿದ್ದಳು. ಶೌಚಾಲಯ ಬಾಗಿಲು ತೆಗಿಸಿದಾಗ ಡಸ್ಟ್ ಬಿನ್?ನಲ್ಲಿ ಸಿಗರೇಟ್ ತುಂಡು ಪತ್ತೆಯಾಗಿತ್ತು. ಸಿಗರೇಟ್ ಕಂಡು ತಕ್ಷಣ ಸಿಬ್ಬಂದಿ ಡಸ್ಟ್ ಬಿನ್‌ಗೆ ನೀರು ಸುರಿದಿದ್ದರು. ಬಳಿಕ ಫ್ಲೈಟ್ ಲ್ಯಾಂಡ್ ಆಗುತ್ತಿದ್ದಂತೆ ಯುವತಿಯನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಕೆಲಕಾಲ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಇತರರ ಜೀವ & ವೈಯಕ್ತಿಕ ಸುರಕ್ಷತೆಗೆ ಅಪಾಯ ಆರೋಪದಡಿ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು