ವಿಭಜನೆ ಕೈಬಿಟ್ಟ ಸರ್ಕಾರ, ಕೋಚಿಮುಲ್ ಅಸ್ಥಿತ್ವ ಮುಂದುವರಿಕೆ

ಕೋಲಾರ ಜೂ,೨೯-ಅವಳಿ ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಹೈನೋದ್ಯಮ ಸಂಸ್ಥೆಯಾದ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ವಿಭಜಿಸುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ.
ಕಳೆದ ವರ್ಷ ಜೂನ್ ೨೨ ರಂದು ರಾಜ್ಯ ಸಹಕಾರ ಸಂಘಗಳ ಜಂಟಿ ನಿಬಂಧಕರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ರಚಿಸಿ ಪ್ರತ್ಯೇಕ ನೋಂದಣಿ ಆದೇಶ ಹೊರಡಿಸಿದ್ದರು. ಇದರ ವಿರುದ್ಧ ಚಿಂತಾಮಣಿ ತಾಲೂಕಿನ ಕೋಚಿಮುಲ್ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣಬಾಬು, ಚಿಕ್ಕಬಳ್ಳಾಪುರದ ನಲ್ಲಕದಿರೇನಹಳ್ಳಿ ಡೇರಿ ಅಧ್ಯಕ್ಷ ಭರಣಿ ವೆಂಕಟೇಶ್, ಶಿಡ್ಲಘಟ್ಟ ತಾಲ್ಲೂಕು ಕೆ.ಮುತ್ತುಗದಹಳ್ಳಿ ಹಾಲು ಡೇರಿ ಅಧ್ಯಕ್ಷ ಆರ್.ಶ್ರೀನಿವಾಸ್, ಶಿಡ್ಲಘಟ್ಟದ ಗುಟ್ಟೂರು ಡೇರಿ ಅಧ್ಯಕ್ಷ ಬೈರಾರೆಡ್ಡಿ, ಶಿಡ್ಲಘಟ್ಟದ ತಿಪ್ಪೇನಹಳ್ಳಿ ಡೇರಿ ಅಧ್ಯಕ್ಷ ಟಿ.ಪಿ.ಪಾರ್ಥಸಾರಥಿ ಹಾಗೂ ಕೋಲಾರ ತಾಲ್ಲೂಕು ಕಿತ್ತಂಡೂರು ಡೇರಿ ಅಧ್ಯಕ್ಷ ಕೆ.ಎ.ಸಂಪತ್‌ಕುಮಾರ್ ಅವರುಗಳು ಸಹಕಾರ ಇಲಾಖೆ ಜಂಟಿ ನಿಬಂಧಕರ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ (ರಿಟ್ ಪಿಟೀಷನ್ ನಂಬರ್ ೧೩೯೫೭/೨೦೨೨(ಸಿ.ಎಸ್) ನ್ನು ದಾಖಲಿಸಿದ್ದರು.
ಕಳೆದ ಒಂದು ವರ್ಷದಿಂದ ಹೈಕೋರ್ಟ್ ನ್ಯಾಯಾಧೀಶ ಎಸ್.ಕೃಷ್ಣಕುಮಾರ್ ಅವರ ನ್ಯಾಯಪೀಠದಲ್ಲಿ ವಿಚಾರಣೆ ನಡೆಯುತ್ತಿತ್ತು. ಊಲವಾಡಿ ಬಾಬು ಮತ್ತಿತರರ ರಿಟ್ ಅರ್ಜಿಯನ್ನು ಆಧರಿಸಿ ಸರ್ಕಾರ ಹೊರಡಿಸಿದ್ದ ಒಕ್ಕೂಟದ ವಿಭಜನೆ ಆದೇಶಕ್ಕೆ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಪಾಲಿಸುವಂತೆ ಸೂಚಿಸಿತ್ತು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಹಠದ ಪರಿಣಾಮವಾಗಿ ಕೋಚಿಮುಲ್ ವಿಭಜನೆ ಆದೇಶವನ್ನು ರಾಜ್ಯ ಸರ್ಕಾರ ೨೦೨೨ರಲ್ಲಿ ಕೈಗೊಂಡಿತ್ತು.ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೂನ್ ೨೬ರಂದು ಸಹಕಾರ ಇಲಾಖೆ ಜಂಟಿ ನಿಬಂಧಕರು ಕೋಚಿಮುಲ್ ವಿಭಜನೆ ಆದೇಶವನ್ನು ವಾಪಸು ಪಡೆದು ಮತ್ತೊಂದು ಆದೇಶ ಹೊರಡಿಸಿದ್ದಾರೆ.
ಜೂನ್ ೨೭ರ ಮಂಗಳವಾರ ಹೈಕೋರ್ಟ್‌ನಲ್ಲಿ ಕೋಚಿಮುಲ್ ವಿಭಜನೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರದ ಪರ ವಕೀಲರು ಸಹಕಾರ ಇಲಾಖೆ ಜಂಟಿ ನಿಬಂಧಕರು ವಿಭಜನೆ ಆದೇಶವನ್ನು ವಾಪಸು ಪಡೆದಿರುವ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠವು ಊಲವಾಡಿ ಅಶ್ವತ್ಥನಾರಾಯಣಬಾಬು ಮತ್ತಿತರರ ತಕರಾರು ಅರ್ಜಿಯನ್ನು ಇತ್ಯರ್ಥಪಡಿಸಿತು.
ಕಳೆದ ಮೂರು ದಶಕಗಳಿಂದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಹೈನೋದ್ಯಮವೇ ಕಾಪಾಡುತ್ತಿದೆ. ಸತತ ಬರಗಾಲದ ನಡುವೆಯೂ ಅವಳಿ ಜಿಲ್ಲೆಯನ್ನು ಕೋಚಿಮುಲ್ ರಕ್ಷಣೆ ಮಾಡಿತ್ತು. ಆದರೆ ಹಿಂದಿನ ರಾಜ್ಯ ಸರ್ಕಾರ ಪೂರ್ವಸಿದ್ಧತೆ ಇಲ್ಲದೆ ಅವಸರದಲ್ಲಿ ಒಕ್ಕೂಟವನ್ನು ವಿಭಜನೆ ಮಾಡುವ ಮೂಲಕ ಎರಡೂ ಜಿಲ್ಲೆಯ ಹೈನುಗಾರರ ಭವಿಷ್ಯಕ್ಕೆ ಕುತ್ತು ತರುವ ಕೆಲಸ ಮಾಡಿತ್ತು. ಅದನ್ನು ವಿರೋಧಿಸಿ ರೈತರ ಹಿತದೃಷ್ಟಿಯಿಂದ ನಾವು ನ್ಯಾಯಾಲಯದ ಮೊರೆ ಹೋಗಿದ್ದೆವು ಎಂದು ಕೋಚಿಮುಲ್ ಚಿಂತಾಮಣಿ ತಾಲ್ಲೂಕಿನ ನಿರ್ದೇಶಕ ಕೆ.ಎ.ಅಶ್ವತ್ಥನಾರಾಯಣಬಾಬು ಹೇಳಿದರು.
ಇದರಿಂದ ಕೋಲಾರದಲ್ಲಿ ಹೊಸದಾಗಿ ಎಂವಿಕೆ ಡೇರಿ ನಿರ್ಮಾಣ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೇರಿಗೆ ಅಗತ್ಯ ಸೌಕರ್ಯಗಳ ವೃದ್ಧಿಯ ಜತೆಗೆ ಅವಳಿ ಜಿಲ್ಲೆಯ ಹಾಲು ಉತ್ಪಾದಕರು ಮತ್ತು ಅವರ ಕುಟುಂಬಗಳ ಹಿತರಕ್ಷಣೆಗಾಗಿ ಕೋಚಿಮುಲ್ ಯಥಾಪ್ರಕಾರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ನಂಜೇಗೌಡ ತಿಳಿಸಿದರು.