ವಿಧಾನಸಭೆ ಚುನಾವಣೆ-2023ಚುನಾವಣಾಧಿಕಾರಿಗಳಿಂದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

ವಿಜಯಪುರ,ಎ.2:: ವಿಧಾನಸಭಾ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗವು ಜಾರಿಗೊಳಿಸಿರುವ ನೀತಿ ಸಂಹಿತೆಗಳನ್ನು ತಪ್ಪದೇ ಪಾಲಿಸುವಂತೆ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಬಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೂಚನೆ ನೀಡಿದರು.
ಶುಕ್ರವಾರ ಬಿಜಾಪುರ ನಗರ ಮತಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13 ಗುರವಾರದಂದು ಅಧಿಸೂಚನೆ ಹೊರಡಿಸುವುದು. ನಾಮಪತ್ರ ಸಲ್ಲಿಸಲು ಏಪ್ರಿಲ್ 20ರ ಗುರುವಾರ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 21ರ ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24ರ ಸೋಮವಾರ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, 2023ರ ಮೇ.10ರ ಬುಧವಾರ ಮತದಾನ ದಿನ, ಮೇ.13ರ ಶನಿವಾರ ಮತ ಎಣಿಕೆ ನಡೆಯಲಿದ್ದು, ಪ್ರಸ್ತುತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲರೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಹೇಳಿದರು.
ಬಿಜಾಪುರ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ 269 ಮತಗಟ್ಟೆಳಿದ್ದು, ಈ ಪೈಕಿ 118 ಕ್ರಿಟಿಕಲ್ ಮತಗಟ್ಟೆಗಳಾಗಿವೆ. 1,37,599 ಪುರುಷ 1,40,056 ಮಹಿಳಾ ಮತದಾರರು ಹಾಗೂ 93 ಇತರೆ ಸೇರಿದಂತೆ ಒಟ್ಟು 2,77,748 ಮತದಾರರಿದ್ದಾರೆ ಎಂದು ಹೇಳಿದರು.
ಸುಗಮ ಚುನಾವಣೆಗಾಗಿ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ 19 ಸೆಕ್ಟರ್ ಅಧಿಕಾರಿಗಳು, 09 ಫ್ಲಾಯಿಂಗ್ ಸ್ಕ್ವಾಡ್, 09 ಎಸ್‍ಎಸ್‍ಟಿ ತಂಡ, 03 ವಿಡಿಯೋ ಸರ್ವೇಲೆನ್ಸ್ ತಂಡ, 01 ವಿವಿಟಿ ತಂಡ, 01 ಲೆಕ್ಕಪತ್ರಗಳ ತಂಡಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ, ತಾವು ಸಹ ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಸಹಕರಿಸುವಂತೆ ಅವರು ಮನವಿ ಮಾಡಿಕೊಂಡಿರು.
ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ತಹಶೀಲ್ದಾರ ಸುರೇಶ ಮುಂಜೆ, ರೇಣುಕಮ್ಮ, ಬಿಎಸ್‍ಪಿಯ ನಿತೇಶ ತೊರವಿ, ಬಿಜೆಪಿಯ ಸಿದ್ದು ಬೆಲ್ಲದ, ಕಾಂಗ್ರೆಸ್‍ನ ಚನ್ನಬಸಪ್ಪ ನಾಮದಾರಿ, ಎಚ್.ಎಸ್.ದಳವಾಯಿ, ಮಚೀಂದ್ರ, ಜೆಡಿಎಸ್‍ನ ಎಂ.ಕೆ.ಬಾಗಾಯತ್, ಎಸ್‍ಡಿಪಿಐನ ನಿಸಾರ ಅಹ್ಮದ ಮನಿಯಾರ ಉಪಸ್ಥಿತರಿದ್ದರು.