
ಚನ್ನಪಟ್ಟಣ, ಮಾ೧೭: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಹುಣಸನಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಬಿಸಲೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಹಾಗೂ ಸಿಡಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವತಾಕಾರ್ಯಗಳು ಆರಂಭಗೊಂಡಿದ್ದವು. ಹೂವಿನ ತೇರು, ಹುಲಿವಾಹನೋತ್ಸವ, ಯಳವಾರ, ಅಭಿ?ಕ ಕಾರ್ಯಕ್ರಮ ನಡೆದಿದ್ದವು. ಹುಣಸನಹಳ್ಳಿಯ ಅಕ್ಕಪಕ್ಕದ ಗ್ರಾಮಗಳಾದ ಕೋಡಂಬಹಳ್ಳಿ, ಕೊಂಡಾಪುರ, ಹುಚ್ಚಯ್ಯನದೊಡ್ಡಿ, ನಾಗಾಪುರ, ಅಕ್ಕೂರು ಸೇರಿದಂತೆ ಹಲವು ಗ್ರಾಮಗಳಿಂದ ಕೊಂಡಕ್ಕೆ ಸೌದೆ ಹಾಕುವ ಕಾರ್ಯಕ್ರಮ ನಡೆಯಿತು. ಕೊಂಡ ಮಹೋತ್ಸವದಲ್ಲಿ ಹುಣಸನಹಳ್ಳಿಯ ಅಕ್ಕಪಕ್ಕದ ಗ್ರಾಮಗಳ ಭಕ್ತಾಧಿಗಳಿಂದ ಕೊಂಡಸೌದೆ ಮೆರವಣಿಗೆ, ನಂತರ ರಾತ್ರಿಪೂರಾ ದೇವತಾ ಮೆರವಣಿಗೆ, ಮುಂಜಾನೆ ಕೊಂಡ ಹಾಯುವ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭ ದಲ್ಲಿ ಬಾಣಬಿರುಸು, ಹೆಬ್ಬಾರೆ ಕಾರ್ಯಕ್ರಮಗಳು ನಡೆದು ರಥೋತ್ಸವ ನಡೆಯಿತು.
ಸಿಡಿ ಹಾಗೂ ಜಾತ್ರಾ ಮಹೋತ್ಸವದಲ್ಲಿ ಅಕ್ಕಪಕ್ಕದ ಗ್ರಾಮಗಳ ಭಕ್ತಾಧಿಗಳಲ್ಲದೆ, ತಾಲ್ಲೂಕಿನ ವಿವಿಧ ಮೂಲೆಗಳಿಂದ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತಾಧಿಗಳು ಪಾಲ್ಗೊಂಡರು. ಸಿಡಿ ಉತ್ಸವದಲ್ಲಿ ಭಕ್ತರು ತಮ್ಮ ಮಕ್ಕಳೊಂದಿಗೆ ಸಿಡಿ ಆಡುವ ಮೂಲಕ ಭಕ್ತಿಭಾವ ಮೆರೆದರು. ಹಾಗೆಯೆ ಸಿಡಿರಣ್ಣ ದೇವರಿಗೆ ಹಣ್ಣು ಜವನ ಎಸೆಯುವ ಮೂಲಕ ತಮ್ಮ ಪ್ರಾರ್ಥನೆ ಸಲ್ಲಿಸಿದರು.
ಸಿಡಿ ಪ್ರಯುಕ್ತ ಗ್ರಾಮದ ಶ್ರೀಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ ಭಕ್ತಾದಿಗಳಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿತ್ತು. ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ಈ ವೇಳೆ ಸ್ಥಳೀಯ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾ.ಪಂ. ಸದಸ್ಯರು ಪಾಲ್ಗೊಂಡಿದ್ದು ವಿಶೇ?ವಾಗಿತ್ತು. ದೇವತಾ ಕಾರ್ಯದಲ್ಲಿ ಹುಣಸನಹಳ್ಳಿ, ಕೋಡಂಬಹಳ್ಳಿ, ಕೊಂಡಾಪುರ, ಹುಚ್ಚಯ್ಯನದೊಡ್ಡಿ, ಅಕ್ಕೂರು, ನಾಗಾಪುರ, ಬಾಚಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು. ಅಕ್ಕೂರು ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.