
ಬೀದರ್:ಜು.27: ವಿಜಡಂ ಪದವಿಪೂರ್ವ ವಿಜ್ಞಾನ ಕಾಲೇಜು ವತಿಯಿಂದ ಇಲ್ಲಿಯ ಸಿದ್ಧಿ ತಾಲೀಂನಲ್ಲಿ ಇರುವ ಕಾಲೇಜು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕಾರ್ಗಿಲ್ ವಿಜಯ ದಿನ ಆಚರಿಸಲಾಯಿತು.
ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯದ ಸಂಕೇತವಾಗಿ ಪ್ರತಿ ವರ್ಷ ಕಾರ್ಗಿಲ್ ವಿಜಯ ದಿನ ಆಚರಿಸಲಾಗುತ್ತದೆ ಎಂದು ವಿಜಡಂ ಕಾಲೇಜು ಕಾರ್ಯದರ್ಶಿ ಮಹಮ್ಮದ್ ಆಸಿಫೊದ್ದಿನ್ ಹೇಳಿದರು.
ಕಾರ್ಗಿಲ್ ಯುದ್ಧದಲ್ಲಿನ ಯೋಧರ ತ್ಯಾಗ, ಬಲಿದಾನವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದರು.
ಕಾಲೇಜು ನಿರ್ದೇಶಕ ಫಸಿಹಾ ಬಾನು ಖಾನ್, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕಾಲೇಜಿನ 50 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪೊಲೀಸರೊಂದಿಗೆ ಕಾರ್ಗಿಲ್ ವಿಜಯ ದಿನ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ವಿದ್ಯಾರ್ಥಿಗಳು ದೇಶದ ಗಡಿ ಕಾಯುವ ಸೈನಿಕರು ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಪೊಲೀಸರು ನಿಜವಾದ ಹಿರೋಗಳು ಎಂದು ಬಣ್ಣಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್, ಡಿವೈಎಸ್ಪಿ ಕೆ.ಎಂ. ಸತೀಶ್, ಸುನೀಲ್, ಮಹಮ್ಮದ್ ಸಲಾವುದ್ದಿನ್ ಫರಹಾನ್, ಮುಶಿದ್ ಮತ್ತಿತರರು ಇದ್ದರು.