ವಾಣಿಜ್ಯ ಬಳಕೆ ವಿದ್ಯುತ್ ಬಿಲ್ ಮೇಲೆ ಗೃಹಜ್ಯೋತಿ ಜಾಹೀರಾತಿಗೆ ಆಕ್ಷೇಪ

ಕಲಬುರಗಿ,ಆ 9: ವಾಣಿಜ್ಯ ವಿದ್ಯುತ್ ಬಿಲ್ಲುಗಳ ಮೇಲೆ ಸರಕಾರದ ಉಚಿತ ಜಾಹೀರಾತು ಪ್ರಕಟಿಸಿದ್ದನ್ನು ಹಿಂಪಡೆಯಬೇಕು ಎಂದು ಜೈ ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ಐದು ಉಚಿತ ಯೋಜನೆಗಳು ಘೋಷಣೆ ಮಾಡಿದೆ.ಆದರೆ ವಾಣಿಜ್ಯ ವಿದ್ಯುತ್ ಸಂಪರ್ಕ ಹೊಂದಿದವರಿಗೆ ಯಾವುದೇ ಉಚಿತ ಯೋಜನೆಗಳು ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ವಾಣಿಜ್ಯ ವಿದ್ಯುತ್ ಸಂಪರ್ಕದಿಂದ ಬರುವ ತೆರಿಗೆಯ ಮೇಲೆಯೇ ಉಚಿತ ಯೋಜನೆಗಳು ಜಾರಿಗೆ ಮಾಡಲು ಸಾಧ್ಯ ಎನ್ನುವುದು ಜನಸಾಮಾನ್ಯರಿಗೂ ಗೊತ್ತು. ಆದರೆ ಧಿಡೀರನೆ ವಾಣಿಜ್ಯ ಸಂಪರ್ಕ ವಿದ್ಯುತ್ ಬಳಕೆದಾರರಿಗೆ ಬಿಲ್‍ನಲ್ಲಿ ಹೆಚ್ಚಳ ಮಾಡಿರುವುದು ಕೂಡ ಒಂದು ಕಡೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತದೆ ಎಂದು ಹೇಳುವ ರಾಜ್ಯದ ಇಂದಿನ ಕಾಂಗ್ರೆಸ್ ಸರ್ಕಾರ, ತಾವು ಇತರೆ ವಸ್ತುಗಳ ಬೆಲೆ ಏರಿಕೆಗೆ ಕಾರಣವಲ್ಲವೇ? ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ, ಅಬಕಾರಿ ಸುಂಕದಲ್ಲಿ ಹೆಚ್ಚಳ? ವಾಣಿಜ್ಯ ಬಳಕೆದಾರರ ವಿದ್ಯತ್ ಬಿಲ್ಲನಲ್ಲಿ ಹೆಚ್ಚಳ? ಇದರಿಂದಾಗಿ ಪ್ರತಿಯೊಂದು ವಸ್ತುಗಳ ಮೇಲೆ ಬೆಲೆ ಏರಿಕೆ ತಾನಾಗಿಯೇ ಬರುವುದಿಲ್ಲವೇ? ಎಂದು ದೇವೇಂದ್ರ ದೇಸಾಯಿ ಕಲ್ಲೂರ ತಮ್ಮ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಉಚಿತ ಯೋಜನೆಗಳು ಜಾರಿಗೆ ಮಾಡುವುದು ಸರ್ಕಾರದ ವಿವೇಚನೆ ಬಿಟ್ಟಿದ್ದು. ಆದರೆ ವಾಣಿಜ್ಯ ವಿದ್ಯುತ್ ಸಂಪರ್ಕ ಪಡೆದ ಸಾರ್ವಜನಿಕರಿಗೆ ಬಿಲ್‍ನ ಹಿಂಬದಿಯಲ್ಲಿ ಗೃಹಲಕ್ಷ್ಮಿ ಯೋಜನೆ ಜಾಹೀರಾತು ಏಕೆ? ಸಾರ್ವಜನಿಕರು ಅದರಲ್ಲೂ ವಾಣಿಜ್ಯ ವಿದ್ಯುತ್ ಬಳಕೆದಾರರು ನೀಡುವ ಹೆಚ್ಚುವರಿ ಹಣದಿಂದ ಉಚಿತ ಯೋಜನೆ ಜಾರಿಗೆ ತಂದು ಅವರ ಬಿಲ್ ಮೇಲೆ ಜಾಹೀರಾತು ಹಾಕುವುದು ಖಂಡನೀಯವಾಗಿದೆ.
ಕೂಡಲೇ ರಾಜ್ಯ ಸರ್ಕಾರ ಹಾಗು ಎಸ್ಕಾಂಗಳು ಗಮನ ಹರಿಸಿ ವಾಣಿಜ್ಯ ವಿದ್ಯುತ್ ಸಂಪರ್ಕ ಹೊಂದಿದ ಮೀಟರ್‍ಗಳ ಬಿಲ್‍ಗಳ ಪಟ್ಟಿಯ ಹಿಂಬದಿಯ ಜಾಹೀರಾತು ನಿಲ್ಲಿಸಬೇಕು. ಇಲ್ಲವಾದಲ್ಲಿ ವಾಣಿಜ್ಯ ಬಳಕೆದಾರರು ಹಾಗೂ ವೇದಿಕೆ ಕಾರ್ಯಕರ್ತರು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ದೇವೇಂದ್ರ ದೇಸಾಯಿ ಕಲ್ಲೂರ ಅವರು ಎಚ್ಚರಿಸಿದ್ದಾರೆ.