ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೩;ವಚನಕಾರರು ಸಮಾಜವನ್ನು ತಿದ್ದುವುದಕ್ಕೆ ನೀಡಿದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನತೆಗೆ ಪರಿಚಯಿಸಿದ ಡಾ.ಫ.ಗು.ಹಳಕಟ್ಟಿಯವರ ಸಾಹಿತ್ಯ ಸೇವೆ ಅವಿಸ್ಮರಣೀಯ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಡಾ.ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ವಚನ ಸಾಹಿತ್ಯ ಮತ್ತು ವಚನಕಾರರ ಬಗ್ಗೆ ಅಮೂಲಾಗ್ರವಾಗಿ ತಿಳಿಯಲು ಡಾ.ಫ.ಗು.ಹಳಕಟ್ಟಿಯವರ ಶ್ರಮದಿಂದ ಸಾಧ್ಯವಾಗಿದೆ. ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ತಾಳೆಗರಿಗಳನ್ನು, ವಚನಗಂಟುಗಳನ್ನು ಮನೆ ಮನೆಗಳಿಗೆ ತೆರಳಿ ಹುಡುಕಿ, ಸಂಗ್ರಹಿಸಿದ ಡಾ.ಫ.ಗು.ಹಳಕಟ್ಟಿಯವರು ಗ್ರಂಥರೂಪದಲ್ಲಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರಳಿ ಬಸವರಾಜ್ ಮಾತನಾಡಿ, 12ನೇ ಶತಮಾನದ ಶಿವ ಶವರಣರು ಜಾತಿ ಮತ್ತು ಧರ್ಮಗಳ ಎಲ್ಲೇ ಮೀರಿ ಲಿಂಗ, ವರ್ಣ, ವರ್ಗ ರಹಿತವಾದ ಸಮಾಜವನ್ನು ಕಟ್ಟುವನಿಟ್ಟಿನಲ್ಲಿ ಶ್ರಮಿವಹಿಸಿ, ಹಿತವಾದ ಬದುಕು ನಡೆಸಿದ ಅನುಭಾವ ಶರಣರು. ಇಂತಹ ಶರಣ ಪರಂಪರೆ 12ನೇ ಶತಮಾನದ ನಂತರ ಕಾಲಗರ್ಭದಲ್ಲಿ ವಚನಗಳಿಗೆ ದೂಳು ಹಿಡಿದು ವಚನಕಾರರ ಬದುಕಿಗೆ ಒಂದಿಷ್ಟು ಮಂಕುಕವಿದಂತಾಯಿತು. ತದನಂತರ ಅಲ್ಲೊಂದು ಇಲ್ಲೊಂದು ಸಂಶೋಧನೆಗಳಾದ ಮೇಲೆ ಅದಕ್ಕೆ ಪೂರ್ಣಸ್ವರೂಪದ ಬೆಳಕನ್ನು, ಕ್ಷಕಿರಣ ಬೀರಲು ಅವತರಿಸಿ ಬಂದ ವ್ಯಕ್ತಿ ಡಾ.ಫ.ಗು.ಹಳಕಟ್ಟಿಯರು ಎಂದರು.ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಎಂಬ ವ್ಯಕ್ತಿ ಒಂದು ಶಕ್ತಿಯಾಗಿ, ಒಂದು ವಿಶ್ವವಿದ್ಯಾಲಯ, ಸರ್ಕಾರಗಳು ಮಾಡದೇ ಇರುವ ಬಹುದೊಡ್ಡ ಕಾರ್ಯವನ್ನು ಕೈಗೆತ್ತಿಕೊಂಡು ಹರಕಲು ಗುಡಿಸಲು, ಮುರುಕಲು ಮನೆ, ಹರಿದ ಚಾಪೆ, ಅಂಗಿ, ಮೇಲೊಂದು ಟೋಪಿ, ಕಚ್ಚೆ ಪಂಚೆ ಹಾಕಿಕೊಂಡು ಫಕೀರನಂತೆ ಸೈಕಲ್ ಮೇಲೆ ಕುಳಿತು ಹಳ್ಳಿಹಳ್ಳಿಗಳನ್ನು, ಮಠಮಾನ್ಯಗಳನ್ನು, ದೇವಾಲಯಗಳನ್ನು ಸುತ್ತಿ ತನ್ನ ಬದುಕನ್ನು ವಚನ ಸಾಹಿತ್ಯಕ್ಕಾಗಿ ಧಾರೆ ಎರೆದ ಮಹಾನ್ ಚೇತನ್ ಎಂದು ಬಣ್ಣಿಸಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಕನ್ನಡ ವಚನ ಸಾಹಿತ್ಯದ ಸಾವಿರಾರು ವಚನಗಳನ್ನು ಡಾ.ಫ.ಗು.ಹಳಕಟ್ಟಿಯವರು ಸಂಗ್ರಹಿಸಿ, ಸಂರಕ್ಷಣೆ ಮಾಡಿದ್ದಾರೆ. ಫ.ಗು.ಹಳಕಟ್ಟಿಯವರ ವೈಯಕ್ತಿಕ ಜೀವನ ದುಃಖಮಯವಾಗಿದ್ದೂ ಸಹ ವಚನಗಳನ್ನು ಮುದ್ರಿಸಲು, ಮುದ್ರಣಾಲಯ ಸ್ಥಾಪನೆಗೆ ಮನೆ ಮಾರಾಟ ಮಾಡಿ, ಕೊನೆಯವರೆಗೂ ಬಡತನದಲ್ಲೇ ಬದುಕಿದವರು ಎಂದರು.