ವಕೀಲರು-ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳು

ತುಮಕೂರು, ಜೂ. ೨೪-ವಕೀಲರು ಮತ್ತು ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪರಸ್ಪರ ಸಹಕಾರ ಮತ್ತು ವಿಶ್ವಾಸದಿಂದ ನ್ಯಾಯಾಲಯವನ್ನು ನಡೆಸಬೇಕು. ಕಕ್ಷಿದಾರರ ಹಿತವನ್ನು ಕಾಯಬೇಕು. ಜುಲೈ ೮ ರಂದು ನಡೆಯುವ ಬೃಹತ್ ಲೋಕ್ ಅದಾಲತ್‌ನಲ್ಲಿ ಹೆಚ್ಚು ಕೇಸುಗಳು ಇತ್ಯರ್ಥವಾಗಲು ವಕೀಲರ ಸಹಕಾರ ಅಗತ್ಯ. ತುಮಕೂರು ತಾಲ್ಲೂಕಿನಲ್ಲಿ ಹೆಚ್ಚು ಕೇಸುಗಳು ನ್ಯಾಯಾಲದಲ್ಲಿ ಬಾಕಿ ಇವೆ. ಎರಡೂ ಕಡೆಯ ಕಕ್ಷಿದಾರರನ್ನು ಕರೆಸಿ ಮಾತನಾಡಿ ರಾಜೀ ಸಂಧಾನ ನಡೆಸಿ ಕೇಸುಗಳನ್ನುಮುಕ್ತಾಯಗೊಳಿಸಲು ಸಹಕಾರ ನೀಡಿ, ಕಾನೂನು ಚೌಕಟ್ಟಿನಲ್ಲಿ ಎಲ್ಲವನ್ನು ಬಗೆಹರಿಸೋಣ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಹೇಳಿದರು.
ಜಿಲ್ಲಾ ವಕೀಲರ ಸಂಘದಲ್ಲಿ ವರ್ಗಾವಣೆ ಆಗಿ ಆಗಮಿಸಿರುವ ನ್ಯಾಯಾಧೀಶರ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನ ಮತ್ತು ಸಿವಿಲ್ ಜೆಎಂಎಫ್‌ಸಿ ನ್ಯಾಯಾಧೀಶರಾದ ಕೆ.ಎಸ್.ನಮ್ರತಾರಾವ್ ರವರು ವಕೀಲರ ಸಹಕಾರದಿಂದ ತುಮಕೂರಿನಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲರ ಸಹಕಾರ, ಸಲಹೆ ಮುಖ್ಯ ಎಂದು ತಿಳಿಸಿದರು.
೬ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಅನಂತ್ ಮಾತನಾಡಿ, ವಕೀಲರು ತಮ್ಮ ಕಕ್ಷಿದಾರರ ಪರ ಯಾವುದೇ ಆದೇಶ ಬಂದರೂ ಸ್ವಾಗತಿಸಬೇಕು. ಒಂದು ಕೇಸಿನಲ್ಲಿ ಸೋತರೂ ಮೇಲಿನ ನ್ಯಾಯಾಲಯದಲ್ಲಿ ಅಫೀಲು ಹೋಗಬಹುದು. ಅದಕ್ಕೆ ಮುಕ್ತ ಅವಕಾಶ ಇರುತ್ತದೆ. ಯಾವುದೇ ವಿಚಾರವನ್ನು ವೈಯಕ್ತಿಕವಾಗಿ ವಕೀಲರ ತೆಗೆದುಕೊಳ್ಳಬಾರದು. ನ್ಯಾಯಾಧೀಶರು ಸಹ ವಕೀಲರ ಸಂಘದ ಸದಸ್ಯರಾಗಿ ಬಂದವರೇ ಆಗಿದ್ದೇವೆ. ವಕೀಲರ ಸಹಕಾರ ನ್ಯಾಯಾಲಯಕ್ಕೆ ಸದಾ ಅವಶ್ಯಕವಾದುದು ಎಂದು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯ ಮಾತನಾಡಿ, ವಕೀಲರಿಗೆ ನ್ಯಾಯಾಲಯ ಸದಾ ಸಹಕಾರ ನೀಡಬೇಕು. ತಮ್ಮ ಕಕ್ಷಿದಾರರ ಹಿತ ಕಾಯುವವರು ನಾವುಗಳು, ವಕೀಲ ವೃತ್ತಿ ಮಾಡುವ ನಮಗೆ ಪಾರ್ಕಿಂಗ್, ನೂತನ ಕಟ್ಟಡ, ಹೀಗೆ ಹತ್ತಾರು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. ಈ ಬಗ್ಗೆ ಎಲ್ಲ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ನಿಮ್ಮೊಂದಿಗೆ ನಾವುಗಳು ಇದ್ದೇವೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಹೆಚ್. ಕೆಂಪರಾಜಯ್ಯ, ಉಪಾಧ್ಯಕ್ಷ ಶಿವಶಂಕರಯ್ಯ, ಪ್ರಧಾನ ಕಾರ್ಯದರ್ಶಿ ಆರ್. ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಸಿ.ಪಾಲಾಕ್ಷಯ್ಯ, ಖಜಾಂಚಿ ಕೆ.ಎಲ್. ಭಾರತಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಎಂ.ಬಿ.ಗುರುಪ್ರಸಾದ್, ಟಿ.ಎಸ್. ಜನಾರ್ಧನ್, ಎಂ.ಬಿ. ನವೀನ್‌ಕುಮಾರ್, ಎಸ್. ಮೋಹನ್, ಶಿವಕುಮಾರಸ್ವಾಮಿ, ಪಿ.ಎಸ್. ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.
ಸಿದ್ಧರಾಜು ಪ್ರಾರ್ಥಿಸಿದರು. ಶಿವಶಂಕರಯ್ಯ ಸ್ವಾಗತಿಸಿದರು. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.