
ಕಲಬುರಗಿ:ಫೆ.27: ಲಿಂಗವನ್ನು ಆಯತ (ಧರಿಸುವುದು) ಮಾಡಿಕೊಳ್ಳುವುದೇ ಲಿಂಗಾಯತ. ಲಿಂಗಾಯತ ತತ್ವ ಕೇವಲ ಆಚರಣೆಯ ಧರ್ಮವಲ್ಲ. ಅನುಸರಿಸುವ ಧರ್ಮ ಎಂದು ರಾಮದುರ್ಗದ ಪ್ರೊ. ಸಿದ್ಧಣ್ಣ ಲಂಗೋಟಿ ಹೇಳಿದರು.
ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಬಸವ ಸಮಿತಿ ಹಾಗೂ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಲಿಂ. ತೇಜಮ್ಮ ರಾಚಪ್ಪ ಹಾಗೂ ಲಿಂ. ಅಕ್ಕಮಹಾದೇವಿ ಬಸವರಾಜ ಮಾಯಾಣಿ ಸ್ಮರಣಾರ್ಥ ಜರುಗಿದ 743ನೇ ಅರಿವಿನ ಮನೆ ಕಾರ್ಯಕ್ರಮದಲ್ಲಿ ಲಿಂಗಾಯತ ತತ್ವ ಆಚರಣೆಯ ಆಚಾರ ತತ್ವ ಕುರಿತು ಅನುಭಾವ ನೀಡಿದ ಅವರು, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಸತ್ಯ ಶುದ್ಧ ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದ್ದಾರೆ. ಲಿಂಗಾಚಾರ ತತ್ವವನ್ನು ಶರಣಸತಿ ಲಿಂಗಪತಿ ಎಂದು ಹೇಳುವ ಮೂಲಕ ಲೌಕಿಕ ಜೀವನವನ್ನು ದೈವತ್ವಕ್ಕೆ ಏರಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಇಷ್ಟಲಿಂಗವನ್ನು ಕರುಣಿಸಿದ ಬಸವಣ್ಣನವರು ಇಷ್ಟಲಿಂಗ ಧರಿಸಿದ ನಂತರ ಅನ್ಯ ದೈವಕ್ಕೆ ಎರಗಬಾರದು ಎಂದು ಹೇಳಿದ್ದಾರೆ. ಲೌಕಿಕದಲ್ಲಿ ಆಚರಿಸುವ ಆಚರಣೆಯಂತೆ ಧಾರ್ಮಿಕ ಲೋಕದಲ್ಲಿಯೂ ಅದನ್ನು ಪರಿಪಾಲಿಸಬೇಕು. ಸದಾಚಾರದಿಂದ ಬದುಕುವ ಜೊತೆಗೆ ಲಿಂಗಾಂಗ ಸಾಮರಸ್ಯ ಹೊಂದಬೇಕು. ಪೂಜೆಯೇ ಕಾಯಕವಾಗುವ ಬದಲು ಕಾಯಕವೇ ಪೂಜೆ ಆಗಬೇಕು. ಕುಲ, ಗೋತ್ರ ಭೇದವೆಣಿಸದೆ ಶಿವಾಚಾರಿಯಾಗಿ ಬದುಕಬೇಕು ಭಕ್ತನಾಗಿ ಭವಿಯನ್ನು ಅರಸುವುದು ಅನಾಚಾರ ಎಂದು ಶರಣರು ಹೇಳಿದ್ದಾರೆ ಎಂದು ವಿವರಿಸಿದರು.
ಲಿಂಗಾಚಾರ, ಸದಾಚಾರ ಮತ್ತು ಶಿವಾಚಾರಗಳ ಪಾಲನೆಯಿಂದ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಸಾಧ್ಯ. ಹೀಗಾಗಿ ಭಕ್ತರಾದವರು ಭವಿಗಳಾಗದೆ ಒಳ್ಳೆಯವರಾಗಿ ಬದುಕಬೇಕು. ಶರಣ ವಿಚಾರಗಳು ಬದುಕಿಗೆ ದಾರಿದೀಪ ಎಂದು ಅವರು ತಿಳಿಸಿದರು. ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ದತ್ತಿ ದಾಸೋಹಿ ಬಸವರಾಜ ಮಾಯಾಣಿ ಇದ್ದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿ ವಂದಿಸಿದರು.