ಸಂಜೆವಾಣಿ ವಾರ್ತೆ
ಕಾರಟಗಿ:ಏ:28: ತಾಲೂಕಿನ ಬೆನ್ನೂರು ತಾಂಡಾದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ತಾಂಡಾ ಮಹಿಳೆಯರು ನೃತ್ಯ ಮಾಡಿ, ಪ್ರಜಾಪ್ರಭುತ್ವ ಹಬ್ಬದಲ್ಲಿ ನಾವೆಲ್ಲರೂ ಪಾಲ್ಗೊಳ್ಳುತ್ತೇವೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಈ ವೇಳೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಭಾಗ್ಯೇಶ್ವರಿ ಅವರು ಮಾತನಾಡಿ, ಮತಗಟ್ಟೆಗೆ ತೆರಳಿ ಮತ ಚಲಾಯಿಸಿ, ಸಂವಿಧಾನಾತ್ಮಕವಾಗಿ ಮತ ಹಾಕುವುದು ನಮ್ಮ ಕರ್ತವ್ಯ, ತಾಂಡದವರು ಯಾರು ಹೊರಗುಳಿಯಬಾರದು. ನಮ್ಮ ಗ್ರಾಮ ಪಂಚಾಯತಿಯು ಶೇ.100 ರಷ್ಟು ಮತದಾನವಾಗಲು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು. ನಂತರ ಮತದಾನ ಕುರಿತು ಪ್ರತಿಜ್ಞಾವಿಧಿ ಭೋದಿಸಲಾಯಿತು.
ವಯಸ್ಸಾದ ಅಜ್ಜಿಯರು ಸಾಂಪ್ರದಾಯಿಕ ಶೈಲಿಯ ಉಡುಪು ತೊಟ್ಟು, ಜಾಗೃತಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ಕೇಂದ್ರ ಬಿಂದುವಾಗಿತ್ತು.
ಗಮನಸೆಳೆದ ಜಾಥಾ: ಮತದಾನದ ಜಾಗೃತಿ ಫಲಕಗಳನ್ನು ಹಿಡಿದು, ಮತದಾನದ ಗೀತೆಗಳನ್ನು ಪ್ರಚುರ ಪಡಿಸುವ ಮೂಲಕ ತಾಂಡದ ಪ್ರಮುಖ ಕಡೆ ಸಂಚರಿಸಿ, ಜಾಗೃತಿ ಮೂಡಿಸಿದರು.
ತದ ನಂತರ ಮೇಣದ ಬತ್ತಿ ಬೆಳಗಿಸುವ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಐಇಸಿ ಸಂಯೋಜಕ ಸೋಮನಾಥ ನಾಯಕ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಶಾಂತಪ್ಪ, ಅಮರೇಗೌಡ, ಕರಿಂ ಸಾಬ್, ಸೋಮನಾಥ ,ರೇಣುಕಾ, ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ತಾಂಡ ನಿವಾಸಿಗಳಾದ ಕಸ್ತೂರಪ್ಪ ರಾಥೋಡ್,ಬಸಪ್ಪ ಚವ್ಹಾಣ್,ಕಾಳು ,ಗುರುನಾಥ, ಕಮಲಪ್ಪ , ಶಾಂತಬಾಯಿ , ಮಾನಮ್ಮ, ಲಕ್ಷ್ಮಿ ಬಾಯಿ, ಬಂಗಾರಮ್ಮ ಇತರರಿದ್ದರು.